09. ವಿಶಿಷ್ಟ ವನಪಾಲಕ ಶ್ರೀ ಅಜ್ಜಂಪುರ ಕೃಷ್ಣಸ್ವಾಮಿ




ಹಿಂದಿನ ಸಂಚಿಕೆಯಲ್ಲಿ ಪ್ರಸ್ತಾಪಿಸಿದ್ದಂತೆ, ಈ ಸಂಚಿಕೆಯಲ್ಲಿ ನಿವೃತ್ತ ಅರಣ್ಯಮುಖ್ಯಾಧಿಕಾರಿ ಶ್ರೀ ಅಜ್ಜಂಪುರ ಕೃಷ್ಣಸ್ವಾಮಿಗಳ ಪರಿಚಯ ಲೇಖನ ಇಲ್ಲಿದೆ. ಅವರ ಸಾಧನೆ, ಸಾಮಾಜಿಕ ಕಾಳಜಿಗಳನ್ನು ಬಿಂಬಿಸುವ ಹಲವಾರು ಅಂಶಗಳನ್ನು ನೀವು ಇಲ್ಲಿ ಗುರುತಿಸಬಹುದು.

ಅವರ ಹಿರಿಯರು ಕಳೆದ ಶತಮಾನದ ಆದಿಭಾಗದಲ್ಲಿ ಅಜ್ಜಂಪುರದ ನಿವಾಸಿಗಳಾಗಿದ್ದವರು. ಕಾಲಾಂತರದಲ್ಲಿ ಈ ಕುಟುಂಬದ ಸದಸ್ಯರು ರಾಜ್ಯದ, ದೇಶದ ಹಾಗೂ ವಿಶ್ವದ ಅನೇಕ ಎಡೆಗಳಿಗೆ ತೆರಳಿ ಸಾಧನೆ ಮಾಡಿದರು. ಈ ಎಲ್ಲ ಹಂತಗಳಲ್ಲೂ ತಮ್ಮ ಹುಟ್ಟೂರಿನ ಬಗೆಗಿನ ಅಭಿಮಾನವನ್ನು ಅವರಾರೂ ಮರೆಯಲಿಲ್ಲವೆನ್ನುವುದು ವಿಶೇಷ. ಸರಳ, ಸಜ್ಜನಿಕೆಯ ಜತೆಜತೆಗೇ, ತಮಗನ್ನಿಸಿದುದನ್ನು ನಿರ್ಭಿಡೆಯಿಂದ ಹೇಳುವ, ಅರಣ್ಯ, ಪರಿಸರ ಮತ್ತು ಮಾನವೀಯತೆಗಳ ಬಗ್ಗೆ ಕಳಕಳಿಹೊಂದಿರುವ ೮೭ರ ಹರೆಯದ ಅಜ್ಜಂಪುರ ಕೃಷ್ಣಸ್ವಾಮಿಗಳು ಉತ್ತಮ ಅಭಿರುಚಿಯ ಪ್ರತೀಕ. ಅವರನ್ನು ಬೆಂಗಳೂರಿನ ಬಿ.ಟಿ.ಎಂ. ಲೇಔಟ್‌ನ ಅವರ ನಿವಾಸಕ್ಕೆ ಹೋಗಿ ಸಂದರ್ಶಿಸಿದೆ. ಅವರು ನೀಡಿರುವ ಅಪರೂಪದ ಛಾಯಾಚಿತ್ರಗಳು, ಲೇಖನಗಳು ಕಳೆದು ಹೋದ ಕಾಲದ ಸಿರಿಯನ್ನು ನೆನಪಿಸುತ್ತವೆ.

"ಅನುಭವದ ಬೆಂಬಲ ಇರುವಷ್ಟು ದೂರಕ್ಕೆ ನನಗೆ ನೆನಪಾದುದನ್ನೆಲ್ಲ ನನ್ನ ಬರಹಗಳಲ್ಲಿ ದಾಖಲಿಸಿದ್ದೇನೆ. ಇವು ಯುವ ಪೀಳಿಗೆಗೆ ಮಾದರಿಯಾದೀತು ಎಂಬ ಆಶಯ ನನ್ನದು, ಅವರು ಅದನ್ನು ಸದುಪಯೋಗ ಮಾಡಿಕೊಂಡರೆ ನನ್ನ ಬರಹ ಸಾರ್ಥಕವಾದಂತೆ. ಈ ಬರಹಗಳಲ್ಲಿ ನಾನು ಎಂದು ಹೇಳಿಕೊಂಡಿರುವ ಎಡೆಯಲ್ಲೆಲ್ಲ, ಅದು ನಾನು ಮಾತ್ರವಲ್ಲ, ನನ್ನ ಹಿರಿಯರ ಕೊಡುಗೆಯೂ ಇದೆ" - ಈ ಮಾತುಗಳಲ್ಲಿ ಅವರ ವಿನಯಶೀಲತೆಯ ಜತೆಗೆ ಕಿರಿಯರ ಬಗೆಗಿನ ಕಾಳಜಿಯೂ ಅಡಗಿದೆ.

''ಬಾಳ ಹರಿವು''  ಈ ಗ್ರಂಥವನ್ನು ತಮ್ಮ ಆತ್ಮಕಥೆಯಲ್ಲವೆಂದು ಅಜ್ಜಂಪುರ ಕೃಷ್ಣಸ್ವಾಮಿಗಳು ಹೇಳಿಕೊಂಡಿದ್ದರೂ, ಅದು ಓದುಗನ ಪಾಲಿಗೆ ಅದು ಹಾಗೆಯೇ ತೋರುತ್ತದೆ ಮತ್ತು ಅದು ಸ್ವಾಭಾವಿಕ ಕೂಡ. ಅವರ ವೈಯುಕ್ತಿಕ ಮತ್ತು ವೃತ್ತಿ ಜೀವನದ ಅನುಭವಗಳ ಸಂಗ್ರಹವಾಗಿರುವ ಈ ಗ್ರಂಥವು  ದಾಖಲೀಕರಣದ (documentation) ಅತ್ಯುತ್ತಮ ಮಾದರಿಯೆನ್ನುವಂತಿದೆಇಂಥ ಪುಸ್ತಕಗಳನ್ನು ಬರೆಯುವಾಗ ಲೇಖಕನಿಗೆ ಚಿಕ್ಕದೊಂದು ಆತಂಕವಿರುತ್ತದೆ. ಅದರಲ್ಲಿ ಸಾಮಾಜಿಕ ಸ್ಥಿತ್ಯಂತರಗಳ ವಿವರಗಳಿರಬಹುದು, ತನ್ನ ಮೇಲಧಿಕಾರಿಗಳ ದರ್ಪವನ್ನು ನಿಭಾಯಿಸಿದ ಸಂದರ್ಭಗಳಿರಬಹುದು, ರಾಜಕಾರಣಿಗಳ ಉಡಾಫೆಯ ವರ್ತನೆಗಳಿರಬಹುದುಸತ್ಯಕ್ಕೆ ಅಪಚಾರವಾಗದಂತೆ ಯಾವುದನ್ನು ಎಷ್ಟರಮಟ್ಟಿಗೆ, ಎಷ್ಟು ಹಾಳತವಾಗಿ ಹೇಳಬೇಕೆಂಬ ವಿವೇಚನೆಯ ಪ್ರಶ್ನೆಗಳನ್ನು, ಎದುರಿಸಿದ ಸಂದರ್ಭಗಳನ್ನು ನವಿರಾದ ಬರವಣಿಗೆಯ ಮೂಲಕ ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಕನ್ನಡದಲ್ಲಿ ವಿಜ್ಞಾನ ಕುರಿತಾದ ಬರಹಗಳನ್ನು ಬರೆಯುವಲ್ಲಿ ಓದುಗನಿಗೆ, ವಿಜ್ಞಾನದ ಒಣ ವಿವರಗಳು ಬೇಸರಹುಟ್ಟಿಸದಂತೆ ನೋಡಿಕೊಳ್ಳುವಂಥ ಪ್ರಜ್ಞೆ  ಲೇಖಕನಿಗಿದ್ದರೆ ಆತನ ಬರಹ ಯಶಸ್ವಿಯಾದೀತು ಎನ್ನಲು ಪ್ರೊ. ಬಿ.ಜಿ.ಎಲ್. ಸ್ವಾಮಿಯವರ ಹಸಿರು ಹೊನ್ನು ನಮ್ಮ ಕಣ್ಣ ಮುಂದಿದೆ. ಅದೇ ರೀತಿ ಅರಣ್ಯ ವಿಜ್ಞಾನದ ಗಹನ ವಿಷಯಗಳನ್ನು ಅಜ್ಜಂಪುರ ಕೃಷ್ಣಸ್ವಾಮಿಗಳು ಅತ್ಯಂತ ಸರಳವಾದ ಬರವಣಿಗೆಯ ಮೂಲಕ ಸುಲಲಿತವಾಗಿ ವಿವರಿಸಿದ್ದಾರೆ. ಅವರ ಇತರ ಕೃತಿಗಳೆಂದರೆ : ಅರಣ್ಯ ಶಾಸ್ತ್ರ, ವನಸಿರಿ, ಖಗಸಿರಿ, ವನವೈಖರಿ, ವನದರ್ಶನಂ, ಜಪಾನ್ ಪ್ರವಾಸ ಕಥನ, ಅಮೆರಿಕಾವನ್ನು ಕುರಿತಾದ ಆಗಮಿಕರ ನಾಡು ಮುಂತಾದವು. ಜಪಾನ್ ಪ್ರವಾಸ ಕಥನದ ತಂತ್ರ ವಿಶಿಷ್ಟವಾದುದು. ಅಲ್ಲಿ ಲೇಖಕನ ಪ್ರವಾಸದ ವಿವರಗಳು ಕೇವಲ ನಿಮಿತ್ತಮಾತ್ರವಾಗಿದ್ದರೆ, ಅದರಲ್ಲಿ ಪಡಿಮೂಡಿಸಿರುವ ಜಪಾನ್‌ನ ಸಂಸ್ಕೃತಿ, ಆಚರಣೆ, ವೈವಿಧ್ಯಗಳ ವಿವರಗಳಿಂದಾಗಿ ಈ ಪುಸ್ತಕ, ಜಪಾನ್ ಕುರಿತಂತೆ ಉತ್ತಮ ಆಕರ ಗ್ರಂಥವನ್ನಾಗಿಸಿದೆ.

ನಿವೃತ್ತಿಯ ನಂತರವೂ ಸಕ್ರಿಯರಾಗಿರುವ ಕೃಷ್ಣಸ್ವಾಮಿಗಳು ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಅವರಿಗೆ ಇಂಟರ್ ನೆಟ್ ಬಳಕೆಯೂ ತಿಳಿದಿದೆಯೆಂದರೆ ಬದಲಾದ ಕಾಲಕ್ಕೆ ತಮ್ಮನ್ನು ಹೇಗೆ ಹೊಂದಿಸಿಕೊಂಡಿರುವರೆಂದು ತಿಳಿಯಬಹುದು. ಅವರ ಮನೆಯ ಮುಂದೆ ಒಂದು ಕಿರುವನವನ್ನು ಅಭಿವೃದ್ಧಿಪಡಿಸಿದ್ದಾರೆ. ಅಲ್ಲಿ ಅನೇಕ ಬಗೆಯ ಮರಗಿಡಗಳನ್ನು ಬೆಳೆಸಿರುವುದಲ್ಲದೆ, ಅವಕ್ಕಿರುವ ಸಸ್ಯಶಾಸ್ತ್ರೀಯ ಹೆಸರುಗಳನ್ನು ಬರೆಸಿ, ಉದ್ಯಾನಕ್ಕೆ ಬರುವ ಮಕ್ಕಳಲ್ಲಿ ಕಾಡು, ಮರ ಗಿಡಗಳ ಬಗ್ಗೆ ಆಸಕ್ತಿ ಬೆಳೆಯುವಂತೆ ಮಾಡಿದ್ದಾರೆ.

ಅಜ್ಜಂಪುರ ಕೃಷ್ಣಸ್ವಾಮಿಗಳ ಸಾಧನೆ ಅಪಾರ. ಅದಕ್ಕೆಂದೇ ಅವರನ್ನು, ಅವರ ಬರಹಗಳನ್ನು ಕುರಿತಾದ ಮಾಹಿತಿಗಳು ಎರಡು ಸಂಚಿಕೆಗಳಲ್ಲಿ ಮೂಡಿಬರಲಿವೆ. ಒಂದು ಇಲ್ಲಿದೆ, ಮತ್ತೊಂದು ಮುಂದಿನ ತಿಂಗಳಿನಲ್ಲಿ. ಎಂದಿನಂತೆ ನಿಮ್ಮ ಅನಿಸಿಕೆಗಳನ್ನು ದಾಖಲಿಸಲು ಕೋರುತ್ತೇನೆ.
* * * * * * *


ಕಾಮೆಂಟ್‌ಗಳು

  1. Hi,Annaiah,

    Thanks a lot, I have not heard about this personality. Interesting and educating. I will read his "Flow of life". Hope you might have collected information about "Amruthmahal - Ajjampur Dairy unit",
    Thanks once again.
    Chandru Ajjampura.

    ಪ್ರತ್ಯುತ್ತರಅಳಿಸಿ
  2. Sur,
    Inwas thrilled to see my ancestors photos in your blog
    Apart from Krishna swamy. My fathers brothers son, my grandfather sri ramappa great grandfather chikkadevrappas .
    This is one of the best days of my life.
    I am grateful to you sir for sending the blog.
    I.will br further grateful to.you ,if you let me whenever you visit bangaloru
    Thanks agaain sir .
    I.look.forward to.see you in person

    Sundara murthy ajjampur

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

125. ಆದರ್ಶ ಅಧ್ಯಾಪಕ ಶ್ರೀ ನಾಗರಾಜ್ ಎಂ.ಎನ್.