ಅಮೃತಮಹಲ್ ಕಾವಲು ಉಳಿಸಿ - ಅವಿರತ ಹೋರಾಟದ ಕ್ರೋಢೀಕೃತ ವರದಿ - ಭಾಗ 2




ಸಚಿವ ಟಿ . ಬಿ. ಜಯಚಂದ್ರರಿಂದ ಪರಿಸ್ಥಿತಿಯ ಪರಿಶೀಲನೆ 


ಈ ತಳಿ ಅಭಿವೃದ್ಧಿ ಕೇಂದ್ರಕ್ಕೆ ಅತಿ ಜರೂರಾಗಿ ಬೇಕಿರುವ ಹೆಚ್ಚುವರಿ ಸಿಬ್ಬಂದಿ, ವಾಹನಗಳು, ಪಶು ಆಸ್ಪತ್ರೆಗಳ ಆರಂಭ, ಮೇವು ಬೆಳೆಯಲು ವ್ಯವಸ್ಥೆ, ಒತ್ತುವರಿಯಾಗಿರುವ ಜಮೀನುಗಳನ್ನು ಬಿಡಿಸಿಕೊಳ್ಳುವುದು, ವಸತಿ ಗೃಹಗಳ ಪುನರ್ ನಿರ್ಮಾಣ, ಭ್ರಷ್ಟ ಕಾವಲುಗಾರ ಸಿಬ್ಬಂದಿಯ ಸುಧಾರಣೆ, ಘನೀಕೃತ ವೀರ್ಯ ಬ್ಯಾಂಕ್ ಸ್ಥಾಪನೆ ಮುಂತಾದ ಹಲವಾರು ಮುಖ್ಯ ಸುಧಾರಣೆಗಳ ಬಗ್ಗೆ ಅವರು ಪ್ರಸ್ತಾಪಿಸಿದರು. ಇದಕ್ಕೆ ಸಾರ್ವಜನಿಕರ, ಸಿಬ್ಬಂದಿಯ ಬೆಂಬಲವನ್ನೂ ಕೋರಿದರು. ಇದೆಲ್ಲವೂ ಕಾರ್ಯಗತವಾಗುವವರೆಗೆ ತಾವು ಕಡೂರಿನಲ್ಲಿ ವಾಸಿಸುತ್ತ ಕಾರ್ಯಾಚರಣೆ ನಡೆಸುವುದಾಗಿಯೂ ತಿಳಿಸಿದರು. ಇದೇ ಹಂತದಲ್ಲಿ ನಿವೃತ್ತ ನಿರ್ದೇಶಕರಾದ ಡಾ. ಟಿ.ಎಸ್. ಕೃಷ್ಣಮೂರ್ತಿಯವರನ್ನು ಸಂಪರ್ಕಿಸಿ, ಅವರ ಅನುಭವದ ಬೆಳಕಿನಲ್ಲಿ ಕೈಗೊಳ್ಳಬಹುದಾದ ಸುಧಾರಣೆಗಳ ಬಗ್ಗೆ ಚರ್ಚಿಸಿದರು. ಅದರಂತೆ ಡಾ. ಕೃಷ್ಣಮೂರ್ತಿಯವರೂ ಸೂಕ್ತವಾಗಿ ಸ್ಪಂದಿಸಿ ಅಗತ್ಯ ಸಲಹೆಗಳನ್ನು ನೀಡಿದರು. 

ಇದೆಲ್ಲ ಆಗಿ ಒಂದು ತಿಂಗಳೂ ಸಂದಿರಲಿಲ್ಲ. ಡಿಸೆಂಬರ್ ವೇಳೆಗೆ, ಹೊಸದಾಗಿ ನಿಯುಕ್ತರಾಗಿದ್ದ ಡಾ. ರಾಮಚಂದ್ರರ ಕಾರ್ಯವೈಖರಿ ಬಯಲಿಗೆ ಬಂದಿತು. ಊದುವುದನ್ನು ಬಿಟ್ಟು ಬಡಿಯುವುದನ್ನು ತೆಗೆದುಕೊಂಡಂತಾಯಿತು ಸಂಸ್ಥೆಯ ಪರಿ. ಹಿಂದಿದ್ದ ಡಾ. ಸುರೇಶ್, ಅಜ್ಜಂಪುರದಲ್ಲಿಯಾದರೂ ಇರುತ್ತಿದ್ದರು. ಡಾ. ರಾಮಚಂದ್ರ ಕಡೂರಿನಿಂದ ಓಡಾಡಿಕೊಂಡು ಕಾರ್ಯನಿರ್ವಹಿಸುತ್ತಿದ್ದರು. ರಾಸುಗಳನ್ನು ಸಮಯಕ್ಕೆ ಸರಿಯಾಗಿ ಮೇಯಲು ಬಿಡದಿರುವುದು, ಅಸ್ವಸ್ಥಗೊಂಡ ಪಶುಗಳಿಗೆ ಚಿಕಿತ್ಸೆಯಿಲ್ಲದಿರುವುದು ಮುಂತಾದ ಕಾರಣಗಳಿಂದ ರಾಸುಗಳು ಸಾಯತೊಡಗಿದವು. ಪ್ರಭಾರಿ ನಿರ್ದೇಶಕರು ಅಜ್ಜಂಪುರ ಕೇಂದ್ರದ ಉಸ್ತುವಾರಿಯನ್ನು ನೋಡಿಕೊಳ್ಳುವುದೇ ದುಸ್ತರವಾಗಿದ್ದಾಗ, ಸಂಬಂಧಿತ ಇತರ ಕೇಂದ್ರಗಳತ್ತ ಗಮನಹರಿಸಲು ಸಾಧ್ಯವಾಗಲೇ ಇಲ್ಲ. ಪಕ್ಕದ ಗ್ರಾಮಗಳ ರಾಸುಗಳು ಅಜ್ಜಂಪುರದ ಕಾವಲಿನಲ್ಲಿ ನಿರಾಳವಾಗಿ ಮೇಯುತ್ತಿದ್ದರೂ, ಯಾವ ಕ್ರಮ ಕೈಗೊಳ್ಳಲಿಲ್ಲ. ಹೊಸದಾಗಿ ನಿರ್ಮಿಸಿದ ನೀರಿನ ಟ್ಯಾಂಕ್ ನ್ನು ಬಳಸಲೇ ಇಲ್ಲ. 

ಟ್ರಾಕ್ಟರ್ ನಲ್ಲಿ ಸಗಣಿ ಕಳ್ಳತನ

ಸಗಣಿ ಸಂಗ್ರಹ ಕಾರ್ಯ  
ಹೇರಳ ಅಮೂಲ್ಯ ಗೊಬ್ಬರ 






ಕೂಲಿ ವಸೂಲಿಯ ಪರಿ !
ಅಸ್ತವ್ಯಸ್ತವಾಗಿ ಬಿದ್ದಿರುತ್ತಿದ್ದ  ಸಗಣಿಯನ್ನು ಸರಿಯಾಗಿ ನಿರ್ವಹಿಸದಿದ್ದುದರಿಂದ, ಹಸುಗಳು ಸಗಣಿಯಲ್ಲೇ ಮಲಗಬೇಕಾದ ಸ್ಥಿತಿಯಿತ್ತು. ಇದರಿಂದಾಗಿ ಅವುಗಳ ಹೊರ ರೂಪ ಕುಂದಿದ್ದರ ಜತೆಗೆ, ನಾನಾ ವಿಧವಾದ ರೋಗಗಳಿಗೆ ತುತ್ತಾಗಬೇಕಾಯಿತು. ಸಗಣಿಯ ಬೆಲೆಯನ್ನು, ಉಪಯುಕ್ತತೆಯನ್ನು ಬಲ್ಲವರೇ ಬಲ್ಲರು. ಕೇಂದ್ರದ ಸಿಬ್ಬಂದಿಯೊಬ್ಬ ತನಗೆ ಬರಬೇಕಿದ್ದ ಕೂಲಿ ಬಾಬತ್ತಿನ ತೀರುವಳಿಗೆ, ಫಾರಂ ಆವರಣದಲ್ಲಿ ಹೇರಳವಾಗಿ ಬಿದ್ದಿರುತ್ತಿದ್ದ  ಸಗಣಿಯನ್ನು ಎತ್ತಿ ತನ್ನ ಖಾಸಗಿ ಜಮೀನಿಗೆ ಸಾಗಿಸಿದ. ಇದಕ್ಕೆ ಅಲ್ಲಿನ ಕಾವಲುಗಾರ ಸಿಬ್ಬಂದಿಯ ಬೆಂಬಲವಿತ್ತೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಸೂಕ್ತ ಚಿಕಿತ್ಸೆಯ ಕೊರತೆಯಿಂದ ರಾಸುಗಳು ಸಾವನ್ನಪ್ಪುವುದು ಸಾಮಾನ್ಯವೆನ್ನುವಂತಾಯಿತು. ತೆರೆದ ಆವರಣದಲ್ಲಿ ಬಿದ್ದಿರುತ್ತಿದ್ದ ಹಸು-ಕರುಗಳನ್ನು ಜೀವಂತವಾಗಿರುವಾಗಲೇ ಹದ್ದು-ಕಾಗೆಗಳು ಕುಕ್ಕಿ ತಿನ್ನುತ್ತಿದ್ದ ದೃಶ್ಯಗಳನ್ನು ನೋಡಿದವರಿದ್ದಾರೆ. ಮತ್ತೊಂದು ರಾಸಿನ ಕೋಡಿನ ಬುಡದಲ್ಲಿ ಹುಳು ಬಿದ್ದು ಬಾಧೆ ಅನುಭವಿಸುತ್ತಿದೆ. ಈ ನಡುವೆ ವಸತಿ ಗೃಹಗಳ ಪುನರ್ ನಿರ್ಮಾಣವನ್ನು ಕೈಗೆತ್ತಿಕೊಂಡ ನಿರ್ದೇಶಕರು ಅಲ್ಲಿಯೂ ನಿರ್ಲಕ್ಷ್ಯ ತೋರಿದ ಬಗ್ಗೆ ವರದಿಗಳಿವೆ.
ನವೆಂಬರ್ 12 2013ರಂದು ಸರಕಾರವು ನೇಮಿಸಿದ ವಿಶೇಷ ಸಮಿತಿಯಲ್ಲಿ ಡಾ. ಚೆಲುವಯ್ಯ, ನಿವೃತ್ತ ನಿರ್ದೇಶಕ, ಡಾ. ಕೆ. ಎಸ್. ಶಿವಕುಮಾರ್, ಸಹಾಯಕ ನಿರ್ದೇಶಕ ಡಾ. ಕೆ.ವಿ. ಕುಲಕರ್ಣಿಯವರಿದ್ದ ತಂಡ ಭೇಟಿ ನೀಡಿತು. ಈ ತಂಡದಲ್ಲಿ ಕೇಂದ್ರದ ಮಾಜಿ ನಿರ್ದೇಶಕರನ್ನೂ ಸೇರಿಸಲಾಗಿದ್ದುದು ಒಂದು ಉತ್ತಮ ಕೆಲಸ. 
ಡಾ. ಟಿ.ಎಸ್. ಕೃಷ್ಣಮೂರ್ತಿಯವರು ತಮ್ಮ ಸೇವಾವಧಿಯಲ್ಲಿ ಈ ಫಾರಂ ಇದ್ದ ಸ್ಥಿತಿಗೂ, ಈಗಿನ ದುಸ್ಥಿತಿಯನ್ನು ನೋಡುವಾಗ ಅವರು ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದರು. ಅವರು ಹೇಳಿದರು – ನನಗೀಗ 75 ವರ್ಷ, ನಿವೃತ್ತಿಯಾಗಿ 15 ವರ್ಷಗಳೇ ಸಂದಿವೆ. ಸರಕಾರದ ಅನ್ನವನ್ನು ತಿಂದಿದ್ದೇನೆ. ಇದೇ ಸ್ಥಳದಲ್ಲಿ ನನ್ನ ಪುತ್ರಿಯ ವಿವಾಹವನ್ನೂ ಮಾಡಿದೆ. ನನ್ನ ತಾಯಿ ಮೃತರಾದಾಗ ಇಲ್ಲಿಯೇ ನಮ್ಮ ಪದ್ಧತಿಯಂತೆ ಅಂತ್ಯಸಂಸ್ಕಾರವನ್ನೂ ಮಾಡಿರುವೆ. ಹೀಗಾಗಿ ಈ ಕೇಂದ್ರದ ಬಗ್ಗೆ ನನಗೆ ಇರುವ ನಂಟು ಕೇವಲ ವ್ಯವಹಾರ ದೃಷ್ಟಿಯದಲ್ಲ, ಬದಲಾಗಿ ನನ್ನ ಮೇಲೆ ಸರಕಾರ ವಿಶ್ವಾಸವಿರಿಸಿ, ಈ ಸಮಿತಿಯ ಸದಸ್ಯನನ್ನಾಗಿ ನೇಮಿಸಿರುವುದರಿಂದ ನನ್ನ ಕರ್ತವ್ಯವನ್ನು ನಿರ್ವಂಚನೆಯಿಂದ ಮಾಡುತ್ತೇನೆ. ಈಗ ಸದ್ಯದಲ್ಲಿ ಆಗಬೇಕಾಗಿರುವ ಕೆಲಸಗಳ ಪೈಕಿ 1 ಕಾವಲುಗಳ ಒತ್ತುವರಿಯ ತೆರವು, 2 ಕಾವಲಿನ ತಳಿ, ಬೀಜ, ಸರಹದ್ದುಗಳನ್ನು ಗುರುತಿಸುವುದು, 3 ರಾಸುಗಳ ಮೇವಿಗಾಗಿ ಸತ್ವಯುತ ಹುಲ್ಲಿನ ಮೇವನ್ನು ಬೆಳೆಸುವುದು, 4 ಅಗತ್ಯವಿರುವಷ್ಟು ಮಂದಿ ಡಿ ದರ್ಜೆ ನೌಕರರ ನೇಮಕಾತಿ ಮುಂತಾದವನ್ನು ಆದ್ಯತೆಯ ಮೇರೆಗೆ ಕೈಗೊಳ್ಳಲಾಗುವುದು. ಈ ಕೇಂದ್ರವನ್ನು ರಾಮಚಂದ್ರಾಪುರ ಮಠದ ವಶಕ್ಕೆ ನೀಡುವ ಬಗ್ಗೆ ಮೂಡಿಬಂದ ಪ್ರಸ್ತಾಪಕ್ಕೆ ಅವರು ವಿರೋಧ ವ್ಯಕ್ತಪಡಿಸಿದರು. ಸಾರ್ವಜನಿಕ ಸಂಸ್ಥೆ, ಸರಕಾರದ ಸಂಸ್ಥೆಗೆ ಜನರೇ ಉತ್ತರದಾಯಿಗಳಾಗಿರುವುದರಿಂದ, ಇಂಥ ಪಲಾಯನವಾದವನ್ನು ಒಪ್ಪಲಾರೆ ಎಂದು ಖಚಿತವಾಗಿ ತಿಳಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

ಅಜ್ಜಂಪುರ ಸೀತಾರಾಂ