92. ನನ್ನ ನೆನಪಿನ ಅಜ್ಜಂಪುರ


ಎಲ್ಲ ಓದುಗರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

ನಿಮ್ಮೆಲ್ಲರ ಸಹಕಾರ ಮತ್ತು ಪ್ರೋತ್ಸಾಹದಿಂದಾಗಿ ಈ ಬ್ಲಾಗ್ ತನ್ನ ಏಳನೆಯ ವರ್ಷವನ್ನು ಪೂರೈಸಿದೆ. ಬ್ಲಾಗ್ ಗೆಂದು ಲೇಖನಗಳನ್ನು ಸಂಗ್ರಹಿಸುವಾಗ ನಿರಂತರ ಶ್ರಮಪಟ್ಟದ್ದಿದೆ, ಬರೆಯುವವರ ಬೆನ್ನು ಬಿದ್ದು ಬರೆಸಿ ಪ್ರಕಟಿಸಿರುವುದಿದೆ. ಇಲ್ಲೆಲ್ಲ ಕೆಲಸ ಮಾಡಿರುವುದು ಲೇಖಕರ, ಓದುಗರ ಪ್ರೀತಿಯೇ ವಿನಾ ನನ್ನಿಂದ ಹಿಂಸೆ ತಾಳಲಾಗದ್ದು ಎಂದು ಯಾರೂ ಭಾವಿಸಲಿಲ್ಲ. ಊರಿನ ಇನ್ನೂ ಹಲವಾರು ಸಂಗತಿಗಳನ್ನು, ಘಟನೆಗಳನ್ನು, ಐತಿಹಾಸಿಕ ವಿವರಗಳನ್ನು, ವ್ಯಕ್ತಿ ಚಿತ್ರಗಳನ್ನು ಪ್ರಕಟಿಸಬೇಕಾದದ್ದು ತುಂಬ ಇದೆ. ಸ್ಥಳೀಯ ಮಾಹಿತಿಗಳನ್ನು ಒಂದುಗೂಡಿಸುವುದು ಕೂಡ ಕನ್ನಡಕ್ಕೆ ಸಂಬಂಧಿಸಿದ ಕೆಲಸವೇ ಸರಿ. ಇದೆಲ್ಲವನ್ನೂ ಮಾಡಲು ಸ್ಥಳೀಕರ ಪ್ರೋತ್ಸಾಹ ಬೇಕಾಗುತ್ತದೆ. ಅವರು ಮಾಹಿತಿಗಳನ್ನು ಕಳಿಸುವಂತಾದಲ್ಲಿ ಪ್ರಕಟಣೆಯ ಕಾರ್ಯ ಸುಲಭವಾದೀತು.
ಈ ಹಿನ್ನೆಲೆಯಲ್ಲಿ ಅಜ್ಜಂಪುರದ ಗಣ್ಯರಲ್ಲಿ ಓರ್ವರಾಗಿದ್ದ ಶ್ರೀ ನಾಗರಾಜ ಶ್ರೇಷ್ಠಿಯವರ ಮೊಮ್ಮಗಳು ಶ್ರೀಮತಿ ಸೌಜನ್ಯಾ ದತ್ತರಾಜರನ್ನು ಲೇಖನ ಬರೆದುಕೊಡಲು ಕೇಳಿದೆ. ಅಜ್ಜಂಪುರಕ್ಕೆ ಸಂಬಂಧಿಸಿದಂತೆ ತನ್ನ ಅನುಭವ ತೀರ ಸೀಮಿತವೆಂದು ಹೇಳಿಯೇ, ಕೆಳಗಿನ ಲೇಖನವನ್ನು ನಿಗದಿತ ದಿನದೊಳಗೆ ಕಳಿಸಿಕೊಟ್ಟರು.  ಸಮೂಹ ಮಾಧ್ಯಮ ಹಾಗೂ ಪತ್ರಿಕೋದ್ಯಮದಲ್ಲಿ ಪದವೀಧರೆಯಾಗಿರುವ ಇವರು ಪ್ರಸ್ತುತ ಬೆಂಗಳೂರಿನ ಪ್ರತಿಷ್ಠಿತ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಅಧ್ಯಾಪಕಿಯಾಗಿ ಕೆಲಸಮಾಡುತ್ತಿದ್ದಾರೆ.  
ಊರಿನ ಹಳೆಯ ನೆನಪುಗಳು ಎಲ್ಲರಿಗೂ ಮಧುರವೇ ಸರಿ. ಅದಕ್ಕೊಂದು ರೂಪ ನೀಡಿ, ಜನರೆದುರಿಗೆ ತರುವಂತಾದರೆ, ಅದು ನಮ್ಮ ಊರಿಗೆ ನಾವು ನೀಡಬಹುದಾದ ಕಿರುಕಾಣಿಕೆ. ಈಗಾಗಲೇ ಅಂತರ ಜಾಲದಲ್ಲಿ ಅಜ್ಜಂಪುರ - ಈ ಬ್ಲಾಗ್ ನ ಲೇಖಕ ಬಳಗದಲ್ಲಿ  ಅಪೂರ್ವ, ಮಲ್ಲಿಕಾರ್ಜುನ ಅಜ್ಜಂಪುರ, ಮಂಜುನಾಥ ಅಜ್ಜಂಪುರ  ವೆಂಕಟೇಶ ಅಜ್ಜಂಪುರ, ಎಂ. ಚಂದ್ರಪ್ಪ, ಡಾ. ಟಿ.ಎಸ್. ಕೃಷ್ಣಮೂರ್ತಿ, ಮಾಲಾ ಮಂಜುನಾಥ್,  ಸತ್ಯನಾರಾಯಣ ಶ್ರೇಷ್ಟಿ,  ಗರುಡನಗಿರಿ ನಾಗರಾಜ, ಶ್ರೀಮತಿ ರೋಹಿಣಿ ಶರ್ಮಾ, ಸುನೀಲ್ ಹಳೆಯೂರು ಹಾಗೂ ಇದೀಗ ಶ್ರೀಮತಿ ಸೌಜನ್ಯಾ ದತ್ತರಾಜ. ಇವರೆಲ್ಲರಿಗೂ ಕೃತಜ್ಞತೆಗಳು. ಇನ್ನೂ ಹೊಸ ಲೇಖಕರು ಸೇರಿಕೊಂಡು ಅಜ್ಜಂಪುರವನ್ನು ಪ್ರಸಿದ್ಧಪಡಿಸುವಲ್ಲಿ ಸಹಕರಿಸಲು ಕೋರುತ್ತೇನೆ. 



ಶಂಕರ ಅಜ್ಜಂಪುರ 
ಸಂಪಾದಕ, ಅಂತರಜಾಲದಲ್ಲಿ ಅಜ್ಜಂಪುರ
ದೂರವಾಣಿ - 99866 72483
ಮಿಂಚಂಚೆ - shankarajp@gmail.com


==================================================================================================
ನನ್ನ ನೆನಪಿನ ಅಜ್ಜಂಪುರ
ಸೌಜನ್ಯಾ ದತ್ತರಾಜ




ನಾನಾಗ ಬಹುಶಃ ಆರನೇ ತರಗತಿ ಇರಬಹುದು, ನಮ್ಮ ಸಮಾಜಶಾಸ್ತ್ರ ಪಠ್ಯದಲ್ಲಿ ಅಮೃತಮಹಲ್ ಹಸುವಿನ ತಳಿಯ ಉಲ್ಲೇಖದೊಡನೆ, ಅಜ್ಜಂಪುರದ ಹೆಸರೂ ಕೂಡ ಪಾಠದಲ್ಲಿತ್ತು. ಅಬ್ಬಬ್ಬಾ, ಅದೆಷ್ಟು ಹೆಮ್ಮೆ ನಮಗೆಲ್ಲಾ ಆಗ. ಅದರ ಸುತ್ತಾ ಪೆನ್ಸಿಲ್ನಲ್ಲಿ ಗೆರೆಯೊಂದನ್ನೆಳೆದು ಎದ್ದು ಕಾಣುವಂತೆ ಮಾಡಿ, ಅಕ್ಕಪಕ್ಕದವರಿಗೆಲ್ಲಾ ತೋರಿಸುವುದೂ ಒಂದು ಹೆಮ್ಮೆಯ ಸಂಗತಿ. ಅಮೃತಮಹಲ್ ತಳಿಯ ಹಸುವಿನ ಹಾಲಂತೂ ಅದೆಷ್ಟು ರುಚಿಯಾಗಿರುತ್ತಿತ್ತೆಂದರೆ, ಬಹುಶಃ ಅಂದಿನ ನನ್ನ ವಯೋಮಾನದವರಾರಿಗೂ, ಹಾಲಿಗೆ ಸಕ್ಕರೆ ಅಥವಾ ಹಾರ್ಲಿಕ್ಸ್, ಬೂಸ್ಟ್ ಮುಂತಾದವುಗಳ ಅಗತ್ಯವೂ ಬಿದ್ದಿರಲಾರದು.

'ಬೆಳ್ಳಗಿರುವುದೆಲ್ಲಾ ಹಾಲಲ್ಲ' ಎಂಬ ಗಾದೆಯನ್ನು ರಾಮಚಂದ್ರಪ್ಪ ಮೇಷ್ಟ್ರು ತರಗತಿಯಲ್ಲಿ ಹೇಳಿಕೊಟ್ಟಾಗ, ನಮ್ಮ ಮನೆಯ ಹಾಲು ಬೆಳ್ಳಗೆ ಇರೋದೇ ಇಲ್ವಲ್ಲಾ ಅನ್ನೋ ಪ್ರಶ್ನೆ ಬಹಳವೇ ಕಾಡಿತ್ತು. ಇಂದಿಗೂ ಅಮೃತಮಹಲ್ ಹಾಲಿನ ಕೆನೆಯ ರುಚಿಯ ನೆನಪು ಮಾಸಿಲ್ಲ. ತಿಳಿಹಳದಿ ಬಣ್ಣದ ಆ ಅಮೃತಮಹಲ್ ಹಾಲಿನ ಹಿತವಾದ ರುಚಿಯೇ ರುಚಿ, ಸಿಹಿಯೇ ಸಿಹಿ.
ಶಿವಾನಂದಾಶ್ರಮದ ಪ್ರವೇಶದ್ವಾರ
ಆಗೆಲ್ಲಾ ಅಜ್ಜಂಪುರದ ಶಿವಾನಂದಾಶ್ರಮವು ನಿಜ-ಅರ್ಥದಲ್ಲಿ ಆಧ್ಯಾತ್ಮಿಕ ಕೇಂದ್ರವಾಗಿತ್ತು. ಅಲ್ಲಿ ನಡೆಯುತ್ತಿದ್ದ ಗೀತಾ ಜಯಂತಿ ಮತ್ತು ಭಗವದ್ಗೀತಾ ಕಂಠಪಾಠ ಸ್ಪರ್ಧೆಗಳು ನನಗಿನ್ನೂ ಕಣ್ಣಿಗೆ ಕಟ್ಟಿದಂತಿವೆ. ಸ್ಪರ್ಧೆಯಲ್ಲಿ ನಾನು ಗೆದ್ದ ಒಂದು ಭಗವದ್ಗೀತೆಯ ಪ್ರತಿ ಮತ್ತು ಒಂದು ಮಕ್ಕಳ ಕತೆ ಪುಸ್ತಕ, ನನ್ನ ಬಳಿ ಈಗಲೂ ಇವೆ. ಸ್ಪರ್ಧೆಯಲ್ಲಿ ನನಗೆ ಬಹುಮಾನ ಬರಲು ಕಾರಣರಾದ ರಾಜೇಶ್ವರಿ ಆಂಟಿಯನ್ನು ಮರೆಯಲು ಸಾಧ್ಯವೂ ಇಲ್ಲ. ವಾರಕ್ಕೆರಡು ದಿನ ಅವರು ನಡೆಸುತ್ತಿದ್ದ ಭಗವದ್ಗೀತೆಯ ಕಲಿಕಾ ತರಗತಿಗಳಿಗೆ ತಪ್ಪಿಸಿಕೊಳ್ಳುವ ಪ್ರಶ್ನೆಯೇ ಇರಲಿಲ್ಲ.

ಶ್ರೀ ಶಿವಾನಂದ ಸ್ವಾಮಿಗಳು
ಅಜ್ಜಂಪುರದಲ್ಲಿ ಹೆಚ್ಚಿನ ಕಾಲ ಇದ್ದವಳಲ್ಲ ನಾನು, ಅಲ್ಲಿನ ನನ್ನ ಅನುಭವ ಬಹಳ ಸೀಮಿತವಾದದ್ದು. ಆದರೂ ಇದ್ದದ್ದು ಕೆಲವೇ ವರ್ಷಗಳಾದರೂ ಅಲ್ಲಿನ ಅನುಭವಗಳು ಬಹಳ ಅಮೂಲ್ಯವಾದಂತಹುವು ಮತ್ತು ನನ್ನ ವ್ಯಕ್ತಿತ್ವವನ್ನು ರೂಪುಗೊಳಿಸುವಲ್ಲಿ ಬಹಳ ಪ್ರಮುಖವಾದಂತಹುವು. ಆಶ್ರಮದಲ್ಲಿ ಆಗೆಲ್ಲಾ ಬೇಸಿಗೆ ರಜೆಯ ಕಾಲದಲ್ಲಿ ಸಂಸ್ಕೃತ ಶಿಬಿರಗಳೂ ನಡೆಯುತ್ತಿದ್ದವು. ಅಲ್ಲಿ ನಾವುಗಳು ಕಲಿತದ್ದು ಬಹಳಷ್ಟಿದೆ.

ಇತ್ತೀಚೆಗೆ ಒಮ್ಮೆ ಬೆಂಗಳೂರಿನ "ರಂಗ ಶಂಕರ"ದಲ್ಲಿ ನಾಟಕ ನೋಡಲು, ಬೀರೂರಿನ ನನ್ನ ಸ್ನೇಹಿತರೊಂದಿಗೆ ಹೋದಾಗ, ನಾಟಕಗಳಲ್ಲಿ ಬಳಸುವ ಪ್ರತಿಮೆಗಳನ್ನು ಹೇಗೆ ಅರ್ಥ ಮಾಡಿಕೊಳ್ಳುವುದು, ಹಾಗೆ ಹೀಗೆ ಎಂದು ಮಾತುಕತೆಗಳು ನಡೆಯುವಾಗ, ಒಂದು ವಿಷಯ ನನ್ನನ್ನು ಅಚ್ಚರಿಗೊಳಿಸಿತ್ತು. ಅವರು ಯಾರೂ ಬೆಂಗಳೂರಿಗೆ ಬರುವ ತನಕ, ಒಂದೂ ನಾಟಕವನ್ನು ನೋಡಿರಲಿಲ್ಲ. ಅಜ್ಜಂಪುರದಿಂದ ಕೇವಲ 15 km ದೂರವಿರುವ ಒಂದು ಊರು ಸಾಂಸ್ಕೃತಿಕವಾಗಿ ಹೇಗೆ ಬೇರೆಯ ಸ್ವರೂಪದ್ದಾಗಿತ್ತು, ಎಂಬುದು ಅರ್ಥವಾಗಿದ್ದು ಆಗಲೇ.
ಶ್ರೀ ಕನ್ಯಕಾಪರಮೇಶ್ವರಿ ದೇವಾಲಯದಲ್ಲಿನ ವರ್ಣಚಿತ್ರಗಳು
ಕೆಲ ವರ್ಷಗಳ ಹಿಂದೆ ನನ್ನ ಮಗಳಿಗೆ ಊರು ತೋರಿಸುವ ಸಲುವಾಗಿ ಅಜ್ಜಂಪುರಕ್ಕೆ ಬಂದಾಗ, ನನ್ನ ಮಗಳು ಎರಡು ವಿಷಯಗಳಿಗೆ ಬಹಳ ಅಚ್ಚರಿ ವ್ಯಕ್ತಪಡಿಸಿದ್ದಳು. ಒಂದು ಯಾವುದೇ ಕಾಗುಣಿತ ಅಥವಾ ವ್ಯಾಕರಣದ ತಪ್ಪುಗಳಿರದ ಅಂಗಡಿ ಮುಂಗಟ್ಟುಗಳ ಬೋರ್ಡ್ ಗಳು ಮತ್ತು ಕನ್ಯಕಾಪರಮೇಶ್ವರಿ ದೇವಾಲಯದಲ್ಲಿನ ವರ್ಣಚಿತ್ರಗಳು.
'ಹಿತ್ತಲ ಗಿಡ ಮದ್ದಲ್ಲ' ಅನ್ನುವ ಕನ್ನಡದ ಗಾದೆ ಮಾತೊಂದು ನನಗೆ ಥಟ್ಟನೆ ನೆನಪಾಗಿತ್ತು. ಹೌದು ನಮಗೆ ಹುಟ್ಟಿದಂದಿನಿಂದ ನೋಡಿರುವ ಕಾರಣದಿಂದ ತೀರಾ ವಿಶೇಷವಾಗೇನೂ ಕಾಣದಿದ್ದುದು, ಇದ್ದಕ್ಕಿದ್ದಂತೆ ತನ್ನ ವಿಶೇಷತೆಯನ್ನು ಪ್ರಕಟಪಡಿಸಿದಂತಾಗಿತ್ತು.
ಕಲಾ ಸೇವಾ ಸಂಘ
ನಮ್ಮ ತಂಡವು ಅಜ್ಜಂಪುರದಲ್ಲಿ ಯಶಸ್ವಿಯಾಗಿ 'ಹೆಡ್ಡಾಯಣ' ನಾಟಕವನ್ನು ಪ್ರದರ್ಶಿಸಿದ್ದಲ್ಲದೇ, ಸಾಣೇಹಳ್ಳಿಯಲ್ಲಿ ನಡೆಯುವ ನಾಟಕೋತ್ಸವದಲ್ಲಿಯೂ ಪ್ರದರ್ಶನ ನೀಡಿತ್ತು. ಅಷ್ಟಲ್ಲದೇ ಕಲಾ ಸೇವಾ ಸಂಘವು ಅಜ್ಜಂಪುರದ ಎಲ್ಲಾ ಸಾಂಸ್ಕೃತಿಕ ಚಟುವಟಿಕೆಗಳ ತಾಣವೂ ಆಗಿತ್ತು. ತರೀಕೆರೆಯಿಂದ ಭರತನಾಟ್ಯ ಶಿಕ್ಷಕರನ್ನು ಕರೆಯಿಸುತ್ತಿದ್ದರು. ಪ್ರತಿ ಶುಕ್ರವಾರ ಮತ್ತು ಶನಿವಾರ ನಮಗೆ ಭರತನಾಟ್ಯದ ತರಗತಿಗಳು ನಡೆಯುತ್ತಿದ್ದವು.
ನಾಟಕಗಳನ್ನು ನೋಡುವುದು, ಅದರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು, ಅಜ್ಜಂಪುರದವರಿಗೆ ಕಲಾ ಸೇವಾ ಸಂಘದ ಅದ್ಭುತವಾದ ಕೊಡುಗೆ.
ಹಿರಿಯ ರಂಗಕರ್ಮಿ ಎ.ಎಸ್. ಕೃಷ್ಣಮೂರ್ತಿ
ನಾಟಕೋತ್ಸವಗಳಲ್ಲಿ ನಾಟಕಗಳನ್ನು ನೋಡಿ ಮಾತ್ರವೇ ಗೊತ್ತಿದ್ದ ನಮ್ಮಂತಹ ಎಳೆಯರ ಗುಂಪು ಕಟ್ಟಿ ನಾಟಕವಾಡಿಸಿದ್ದು ಕೃಷ್ಣಮೂರ್ತಿ ಮಾಮ. ಕೃಷ್ಣಮೂರ್ತಿ ಮಾಮ ನಮ್ಮ ಪಕ್ಕದ ಮನೆಯವರೇ ಆಗಿದ್ದರೂ, ನನಗೆ ಅವರ ಪರಿಚಯವಾದದ್ದು, ಅವರ ನಾಟಕ ಶಿಬಿರದಲ್ಲಿಯೇ. ನಾಟಕವನ್ನು ಹೇಳಿಕೊಡುವುದರ ಜೊತೆಗೆ ಜೀವನದ ಹಲವು ಪಾಠಗಳನ್ನು ಮತ್ತು ಬದುಕಿನೆಡೆಗಿನ ಶಿಸ್ತನ್ನು ಕಲಿತದ್ದು ಆಗಲೇ.
ಹೀಗೆ ಅಜ್ಜಂಪುರದಲ್ಲೊಂದು ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವಾತಾವರಣವೊಂದು ಅನೇಕ ತಲೆಮಾರುಗಳಿಂದ ಬೆಳೆಯುತ್ತಾ ಬಂದಿದೆ.

ಹಣ್ಣೆಗುಡ್ಡದ ಕೋಡುಗಲ್ಲುಗಳು

ಇನ್ನು ಅಜ್ಜಂಪುರದ ಬಳಿಯ ಹಣ್ಣೇ ಗುಡ್ಡ, ಸುತ್ತಮುತ್ತಲಿನ ಕಪ್ಪು ಮಣ್ಣಿನ ಹೊಲಗಳು ಇವುಗಳನ್ನು ಸಹ ಮರೆಯಲು ಸಾಧ್ಯವಿಲ್ಲ.






-0-0-0-0-0-0-0-0-0-0-0-0-0-0-

















                    










ಕಾಮೆಂಟ್‌ಗಳು

  1. Sowjanya Dattaraja ಅಜ್ಜಂಪುರದ ನನ್ನ ನೆನಪಿನ ಸುರುಳಿಯನ್ನು ಬಿಚ್ಚಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು ಅಂಕಲ್. ಕನ್ನಡ ರಾಜ್ಯೋತ್ಸವದ ದಿನ ಪ್ರಕಟವಾದದ್ದು ಇನ್ನೂ ಹೆಚ್ಚಿನ ಸಂತೋಷ ನೀಡುತ್ತಿದೆ.

    ಪ್ರತ್ಯುತ್ತರಅಳಿಸಿ
  2. Quiet good write up. well written with a few memories about Ajjampura. Thanks to Editor Shankar & Sowjanyaa

    ಪ್ರತ್ಯುತ್ತರಅಳಿಸಿ
  3. ಕನ್ನಡವನ್ನು ಆಯ್ಕೆ ಮಾಡಿ

    ಕನ್ನಡದ ಅರಮನೆಗೆ ಬರಲು ತಮಗೆ ಆದರದಿಂದ ಸ್ವಾಗತಿಸುತ್ತೇವೆ... :pray:
    ಕನ್ನಡವನ್ನು ಉಳಿಸಿ, ಬೆಳೆಸಿ..
    ..
    https://Www.spn3187.blogspot.in
    (already site viewed 1,33,487+)
    and
    https://T.me/spn3187
    (already joined to this group 487+)
    Share your friends & family also subcrib (join)

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

ಅಜ್ಜಂಪುರ ಸೀತಾರಾಂ