96. ಅಜ್ಜಂಪುರದಲ್ಲಿ ಪ್ರಥಮ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ







ದಿನಾಂಕ 23 ಫೆಬ್ರವರಿ 2019ರಂದು ಅಜ್ಜಂಪುರದಲ್ಲಿ ಸಾಹಿತ್ಯ ಸಮ್ಮೇಳನ ಜರುಗಿತು. ಅಜ್ಜಂಪುರವು ಇತ್ತೀಚೆಗೆ ತಾಲೂಕು ಆಗಿ ಪರಿವರ್ತನೆಯಾದ ಸಂದರ್ಭದಲ್ಲಿ, ಸಾಹಿತ್ಯ ಸಮ್ಮೇಳನ ನಡೆಸುವುದರ ಮೂಲಕ, ತಾಲೂಕಿನ ಅಸ್ತಿತ್ವವನ್ನು ಜಾಹೀರುಪಡಿಸಲು ಈ ಉತ್ಸವದ ಆಯೋಜನೆ ಸಹಕಾರಿಯಾಯಿತು. 

ಮೊದಲ ಸಮ್ಮೇಳನವಾದ್ದರಿಂದ ಏರ್ಪಾಡಿನ ವ್ಯವಸ್ಥೆಗಳಲ್ಲಿ ಕೊಂಚ ಏರುಪೇರಾದುದು ಸ್ವಾಭಾವಿಕ. ಆದರೆ ಸಾಹಿತ್ಯ ಸಮ್ಮೇಳನವೆನ್ನುವುದು ನೆಪಮಾತ್ರದಂತೆ ಆಯಿತೆನ್ನಲು ಇಂದು ಸಾಹಿತ್ಯಕ್ಕಿಂತಲೂ, ಸಾಹಿತಿಗಳ ಕುರಿತಾದ ಮನೋಭಾವ ಬದಲಾಗಿರುವುದು ಕಾರಣ ಎನ್ನುವುದು ಎದ್ದು ಕಾಣುವಂತಿತ್ತು. ಸಾಹಿತಿಗಳನ್ನು ಗೌರವದಿಂದ, ಆರಾಧನಾ ಭಾವದಿಂದ ನೋಡುವ ದಿನಗಳಿದ್ದವು. ಬರೆಯುವುದು, ಬದುಕುವುದು ಪ್ರತ್ಯೇಕ ಎನ್ನುವಂತಿರದ ಆ ದಿನಗಳಲ್ಲಿ, ಅಂಥ ಗೌರವ ಸಹಜವಾಗಿತ್ತು.

ಆದರೆ ಸಾಹಿತಿಗಳಷ್ಟೇ ಅಲ್ಲದೆ, ಸಾಹಿತ್ಯ ಕೃತಿಗಳ ಮೌಲ್ಯಗಳು ಅಧೋಗತಿಗೆ ಇಳಿದುದರ  ಪರಿಣಾಮಗಳು, ಸಾಹಿತ್ಯವಷ್ಟೇ ಅಲ್ಲದೆ,  ಜೀವನಕ್ಕೆ ಸಂಬಂಧಿಸಿದ  ಇತರ ಅಂಶಗಳೂ ಈ ವೇದಿಕೆಯಲ್ಲಿ ಮೆರೆಯಬೇಕೆಂಬುದು ಸಹಜ ನಿಲುವಾಗಿ ಪರಿಣಮಿಸಿತು. ಈ ಅಂಶಗಳನ್ನೇ ಸಮ್ಮೇಳನಕ್ಕೆ ಆಗಮಿಸಿದ್ದ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಗೊ.ರು. ಚನ್ನಬಸಪ್ಪನವರು ಹಾಗೂ ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಪ್ರತಿಪಾದಿಸಿದರು.


ಕಾರ್ಯಕ್ರಮದ ಅಧ್ಯಕ್ಷರಾಗಿ ಖ್ಯಾತ ರಂಗಕರ್ಮಿ ಶ್ರೀ ಎ.ಎಸ್.ಕೃಷ್ಣಮೂರ್ತಿ ಮಾತನಾಡಿ, ಕಲೆ, ಸಾಹಿತ್ಯಗಳು ತಮ್ಮ ಜೀವನವನ್ನು ಹೇಗೆ ಪ್ರಭಾವಿಸಿದವು ಮತ್ತು ಅಜ್ಜಂಪುರದ ಸಾಂಸ್ಕೃತಿಕ ವೈಭವ ಮರೆಯಾಗಿರುವುದರ ಬಗ್ಗೆ ವಿಷಾದಿಸಿದರು. ಅಜ್ಜಂಪುರದ ಶಿವಾನಂದಾಶ್ರಮ, ಕಲಾಸೇವಾ ಸಂಘಗಳು ಮೂಲೆಗುಂಪಾಗಿರುವುದರ ಬಗ್ಗೆ ಅವರ ದುಃಖ ಸಹಜವೇ ಸರಿ. ಅವರು ಸಂಗ್ರಹಿಸಿರುವ ರಂಗಚಟುವಟಿಕೆಗಳ ದಾಖಲೆಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

ಸಮ್ಮೇಳನದಲ್ಲಿ ಒಟ್ಟು ಮೂರು ಗೋಷ್ಠಿಗಳಿದ್ದವು. ಅದರಲ್ಲಿ ಮೊದಲನೆಯ ಗೋಷ್ಠಿಯ ಪ್ರವೇಶನುಡಿಗಳನ್ನು ನಾನು ಸಾದರಪಡಿಸುವ ಅವಕಾಶ ದೊರಕಿತ್ತು. ನನ್ನ ವಿದ್ಯಾಗುರುಗಳಾದ ಶ್ರೀ ಗೌ.ರು.ಓಂಕಾರಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಗೋಷ್ಠಿಯ ವೇದಿಕೆಯನ್ನು ಅನೇಕ ಮಿತ್ರರೊಡನೆ ಹಂಚಿಕೊಂಡ ಸದವಕಾಶವು ನನ್ನ ಪಾಲಿಗೆ ಎಂದೆಂದೂ ಸ್ಮರಣೀಯವೇ ಸರಿ. ನಾನು ಸಂಪಾದಿಸುತ್ತಿರುವ ಈ ಬ್ಲಾಗ್ ನಲ್ಲಿ ಸ್ಮರಿಸಿರುವ ಹಿರಿಯರು, ಸ್ಥಳವಿಶೇಷಗಳು, ಕೆಲವು ಘಟನೆಗಳು, ಸಾಹಿತ್ಯ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ದುಡಿದಿರುವ ಮಹನೀಯರನ್ನು ಕುರಿತು ಮಾತನಾಡಿದೆನಾದರೂ, ದೊರೆತ ಸಮಯಾವಕಾಶ ಕಡಿಮೆಯಾಯಿತಾಗಿ, ಹೆಚ್ಚಿನ ಅಂಶಗಳನ್ನು ಪ್ರಸ್ತಾಪಿಸಲಾಗಲಿಲ್ಲ. 
ಇದಕ್ಕೆ ಆರಂಭದ ಉದ್ಘಾಟನಾ ಸಮಾರಂಭವು ಒಂದೂವರೆ ಗಂಟೆಗಳಷ್ಟು ದೀರ್ಘವಾಗಿದ್ದುದು. ಸಮಯಪಾಲನೆಯಲ್ಲಿ ವ್ಯತ್ಯಯ ಮುಂತಾದುದು ಕಾರಣವಾಯಿತು. ಅದು ಮುಂದಿನ ಕಾರ್ಯಕ್ರಮಗಳಲ್ಲೂ ಪ್ರತಿಫಲಿಸಿತು.

ತಾಲೂಕು ಆಗಿರುವ ಅಜ್ಜಂಪುರದಲ್ಲಿ ಆಗಬೇಕಾಗಿರುವ ಕೆಲಸ-ಕಾರ್ಯಗಳ ಬಗ್ಗೆ ನೂತನ ತಹಶೀಲ್ದಾರರು ತಮ್ಮ ಯೋಜನೆಗಳನ್ನು ಬಿಚ್ಚಿಡಬಹುದಿತ್ತು. ಆದರೆ ಅದೂ ಆಗಲಿಲ್ಲ. ಆದರೆ ಮುಂದೆ ಮಾತನಾಡಿದ ಶ್ರೀ ಅರವಿಂದ ರಾಮಚಂದ್ರ ಐರಣಿಯವರು, ಮಾದರಿ ತಾಲೂಕಿನ ಚಿತ್ರವನ್ನು ತೆರೆದಿಟ್ಟರು. ಕಛೇರಿಗಳು ಒಂದೆಡೆ ಇರಬೇಕಾದುದು, ನೌಕರರಿಗೆ ವಸತಿಯ ಏರ್ಪಾಡು ಮುಂತಾದ ಉತ್ತಮ ಸಲಹೆಗಳನ್ನು ನೀಡಿದರು. ಶ್ರೀ ಅಶೋಕ ಕುಮಾರ್ ಪ್ರಸ್ತುತ ಪಡಿಸಿದ ಸಂಗತಿಗಳಲ್ಲಿ ಎರಡು ತಾಲೂಕುಗಳ ನಡುವೆ ಬದುಕುತ್ತಿರುವ ಜನಗಳ ಬವಣೆಯನ್ನು ನೀಗಿಸಬೇಕೆಂದು ಒತ್ತಾಯಿಸಿದರು. ಗ್ರಾಮೀಣ ಪ್ರದೇಶದವರಾದ ಅವರ  ನೇರ ನುಡಿಗಳು ಸಂಬಂಧಿಸಿದವರಿಗೆ ತಲುಪುವಂತಾಗಿದ್ದರೆ ಚೆನ್ನಿತ್ತು. ಗೋಷ್ಠಿಯಲ್ಲಿ ಜನರ ಹಾಜರಾತಿ ಚೆನ್ನಾಗಿಯೇ ಇತ್ತು. ಆದರೆ ಅಧಿಕಾರಿಗಳು ಕಾಣುವಂತಿರಲಿಲ್ಲ.

ಈ ನೆಪದಿಂದಾಗಿ ಹಳೆಯ ಗೆಳೆಯರಾದ ಎ.ಸಿ. ಚಂದ್ರಪ್ಪ, ಮಹಾವೀರ, ಜಿ.ಬಿ.ಅಪ್ಪಾಜೀ ಮುಂತಾಗಿ ಹಲವರನ್ನು ಭೇಟಿಮಾಡುವ, ಮಾತನಾಡಿಸುವ ಸದವಕಾಶ ದೊರೆಯಿತು. ಸಮಾರಂಭದ ಕೆಲವು ಚಿತ್ರಗಳನ್ನು ಈ ಕೆಳಗೆ ನೀಡಲಾಗಿದೆ.

ಕೊನೆ ಸಿಡಿ- ಇಂಥದು ಆಗಬಾರದು. ಇದನ್ನು ಪ್ರಸ್ತಾಪಿಸಬಾರದೆಂದುಕೊಂಡರೂ, ಅದರ ಗಂಭೀರತೆ ಹಾಗೂ ನಿರೂಪಕರ ಜವಾಬ್ದಾರಿ ಎಂಥದು ಎಂದು ತಿಳಿಸುವಂತಿರುವ  ಕಾರಣಕ್ಕಾಗಿ ಇದನ್ನು ಪ್ರಸ್ತಾಪಿಸುವುದು ಅನಿವಾರ್ಯವಾಗಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಪುಲ್ವಾಮಾದಲ್ಲಿ ಹುತಾತ್ಮರಾದ ವೀರಯೋಧರು, ನಡೆದಾಡುವ ದೇವರು ಡಾ. ಶಿವಕುಮಾರ ಸ್ವಾಮಿಗಳು ಹಾಗೂ ಫೆ.22ರಂದು ನಿಧನರಾಗಿದ್ದ ಶ್ರೀ ಕೋ.ಚೆನ್ನಬಸಪ್ಪನವರಿಗೆ ಶ್ರದ್ಧಾಂಜಲಿ, ಮೌನಾಚರಣೆಗಳನ್ನು ಸಲ್ಲಿಸಬೇಕಾಗಿದ್ದುದು ಕರ್ತವ್ಯವೇ ಹೌದು. ಆದರೆ ನಿರೂಪಕರು ಬಾಯಿತಪ್ಪಿನಿಂದಾಗಿ, ಕೋ.ಚನ್ನಬಸಪ್ಪ ಎನ್ನುವುದರ ಬದಲಾಗಿ ಗೊ.ರು. ಚನ್ನಬಸಪ್ಪ ಎಂದುಬಿಟ್ಟರು. ಅದು ನಿಜಕ್ಕೂ ಬಾಯಿತಪ್ಪಿನಿಂದ ಉಂಟಾಯಿತು ಎನ್ನುವುದರಲ್ಲಿ ಎರಡು ಮಾತಿಲ್ಲ. ಸಾಹಿತ್ಯ, ಸಾಹಿತಿಗಳ ಅಪಮೌಲ್ಯಗಳಿಗೆ ವಿಷಾದ ವ್ಯಕ್ತಪಡಿಸುತ್ತ, ಖಾರವಾದ ನುಡಿಗಳಿಂದಲೇ ಟೀಕಿಸಿದ ಗೊ.ರು.ಚ. ಈ ಬಾಯಿತಪ್ಪಿನ ಮಾತಿಗೆ ಚಾಟಿ ಬೀಸಿದ್ದು ಸಹಜವೇ ಆಗಿತ್ತು. ಇಂಥದು ನಡೆಯಬಾರದು. ನಾನಿನ್ನೂ ಜೀವಂತ ಇದ್ದೇನೆ ಎಂದು ನೆನಪಿಸಿಕೊಂಡು ವ್ಯಥೆಪಟ್ಟರು. ಇದೊಂದು ಕಪ್ಪುಚುಕ್ಕೆಯ ವಿನಾ ಉಳಿದಂತೆ ಎಲ್ಲವೂ ಸಾಂಗವಾಗಿ ನಡೆಯಿತು.


ಅಜ್ಜಂಪುರ ಸೂರಿ ತುಂಬ ವಿನಯವಂತರು, ಉತ್ತಮ ಸಂಘಟಕರು. ಅವರೆಂದೂ ಪ್ರಚಾರಕ್ಕೆ ಹಪಹಪಿಸಿದವರಲ್ಲ. ಸಮ್ಮೇಳನದಲ್ಲಿ ನನ್ನ ಭಾಷಣಕ್ಕೆ ನೀಡಿದ ಸಮಯಕ್ಕೆ ಮೊದಲೇ ಚೀಟಿ ಕಳಿಸಿದ್ದರಿಂದ    ಅವರ ಹೆಸರನ್ನು ನನ್ನ ನುಡಿಗಳಲ್ಲಿ ಪ್ರಸ್ತಾಪಿಸಲಾಗಿರಲಿಲ್ಲ. ಆದರೆ ಅದನ್ನು ಚೀಟಿ ಕಳಿಸಿ ನೆನಪಿಸುವ ಕೆಲಸವನ್ನು ಅವರ ಪುತ್ರ ಶ್ರೀನಿವಾಸ್ ಮಾಡಿದರು. ಆ ಸಮಯೋಚಿತ ಪ್ರತಿಕ್ರಿಯೆಗೆ ನನ್ನ ಮೆಚ್ಚುಗೆಯಿದೆ. ಆದರೆ ನಂತರ ಅಜ್ಜಂಪುರ ಸೂರಿ ಎಂಬುವವರಿದ್ದರೆಂದು ನಿಮಗೆ ತಿಳಿದಿದೆಯೇ ಎಂದು ವೇದಿಕೆಯಲ್ಲೇ ವ್ಯಂಗ್ಯಾತ್ಮಕವಾಗಿ ನನ್ನನ್ನು ಪ್ರಶ್ನಿಸಿದ್ದು ಔಚಿತ್ಯ ಮೀರಿದ್ದು ಎಂದು ತಿಳಿಯಬೇಕಾಯಿತು.  ಅಜ್ಜಂಪುರ ಸೂರಿಯವರ ಬಗ್ಗೆ ಪ್ರೀತಿಯಿಲ್ಲದಿದ್ದರೆ, ಈ ಬ್ಲಾಗ್ ನಲ್ಲಿ ಅವರನ್ನು ಕುರಿತಾಗಿ ಎರಡು ಲೇಖನಗಳನ್ನು ಬರೆಯುತ್ತಿರಲಿಲ್ಲ. ಅವರ ಬಗ್ಗೆ ವಿವರಗಳನ್ನು ಅಜ್ಜಂಪುರ ಮಲ್ಲಿಕಾರ್ಜುನ ಇವರು ಪ್ರೀತಿಯಿಂದ ಒದಗಿಸಿದಂತೆ, ಮತ್ತೊಂದು ಲೇಖನವನ್ನು ಶಿವಮೊಗ್ಗದ ಶ್ರೀಮತಿ ಶಾರದಾ ಕೆ. ಉಳುವೆ ಇವರು ಬರೆದ ಲೇಖನವನ್ನು ಅಮೆರಿಕಾದಲ್ಲಿ ಕುಳಿತು ಅವರ ಅನುಮತಿ ದೊರಕಿಸಿಕೊಂಡು ಪ್ರಕಟಿಸಿದ ಸಂಗತಿಯನ್ನು ಶ್ರೀನಿವಾಸ್ ಅವರಿಗೆ ತಿಳಿಸಿದೆ. ಅವರ ಉತ್ತರ : “ಅವೆರಡೂ ಲೇಖನಗಳನ್ನು ನಾನು ನೋಡಿಲ್ಲ ಎಂದರು!

ಕಾಮೆಂಟ್‌ಗಳು

  1. ಅಜ್ಜಂಪುರ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಕುರಿತ ವರದಿ ನೋಡಿ ಖುಷಿಯಾಯಿತು. ನಮ್ಮೆಲ್ಲರ ಪ್ರೀತಿಯ ಗುರುಗಳಾದ ಶ್ರೀ ಗೌ.ರು.ಓಂಕಾರಯ್ಯನವರೊಂದಿಗೆ, ನಮ್ಮ ದತ್ತಶಂಕರ್ ಗೆ,ವೇದಿಕೆ ಹಂಚಿಕೊಳ್ಳುವ ಸೌಭಾಗ್ಯ ಸಿಕ್ಕಿರುವುದು ಅಭಿನಂದನೆ ಸಲ್ಲಿಸಲು ದುಪ್ಪಟ್ಟು ಹೆಮ್ಮೆ, ಸಂತಸವಾಗುತ್ತದೆ. ನಮ್ಮ ಸ್ನೇಹಿತರನೇಕರಿಗೆ ಸಾಹಿತ್ಯದ ಪ್ರೇರಣೆ,ಓನಾಮ ನೀಡಿದ ಪ್ರಾಥಃಸ್ಮರಣೀಯರು ಶ್ರೀ ಓಂಕಾರಯ್ಯ ಮೇಷ್ಟ್ರು.

    ಇನ್ನು ಶ್ರೀ ಅಜ್ಜಂಪುರ ಜಿ ಸೂರಿಯವರ ಕುರಿತ ಪ್ರಸಂಗ ನೆಡೆಯಬಾರದಿತ್ತು. ನಮ್ಮೂರಿಗೆ ಹೆಸರು ತಂದ ಹಿರಿಯರ ಚಿತ್ರಪಠಗಳ ಸಾಲಲ್ಲಿ ಎದ್ದು ಕಾಣುವಂತಹದ್ದು ಅವರ ನಗುಮೊಗವೇ. ನಾವು ನೆನಪಿಸಿಕೊಳ್ಳುವ ಅವರ ವಾಙ್ಮಯ ತಪಸ್ಸು, ಸಾಧನೆ,ಇವುಗಳಿಗಿಂತಲೂ ಹೆಚ್ಚಾದ, ನಮಗೆ ಅತಿ ಪ್ರಿಯವಾದ ಅವರ ಪ್ರೀತಿಯನ್ನು ಯಾರೂ ಎಂದೂ ಮರೆಯಲಾಗದದ್ದು. ಈ ಹಿಂದೆ ಅಜ್ಜಂಪುರ ಬ್ಲಾಗ್ ನಲ್ಲಿ, ಅವರ ಬಗ್ಗೆ ದತ್ತಣ್ಣ ಸೂಕ್ತವಾಗಿ ಸ್ಮರಿಸಿ ಗೌರವ ಸಲ್ಲಿಸಿದ್ದಾರೆ. ಹೀಗಿದ್ದೂ, (ಅದರ ಅರಿವಿಲ್ಲದ) ನನಗೆ ತಿಳಿದಂತೆ ,ತಮ್ಮ ತಂದೆಯವರ ಹಾಗೆ ಸ್ನೇಹ, ವಿನಯಗಳ ಮೂರ್ತಿವೆಂತಿದ್ದ ಶ್ರೀ ಸೂರಿಯವರ ಮಗ ಶ್ರೀನಿವಾಸರು ಹೀಗೆ ಔಚಿತ್ಯ ಮೀರಿ ಮಾತನಾಡಿದರೆಂಬುದು ನಿಜಕ್ಕೂ ಅನುಚಿತವೇ. ಯಾರಾದರೂ ಶ್ರೀ ಸೂರಿಯವರನ್ನು ಸ್ಮರಿಸಲಿ, ಸ್ಮರಿಸದಿರಲಿ.ಇವನ್ನೆಲ್ಲಾ ಮೀರಿ ದಿಗಂತದಲ್ಲಿ ನಿಂತ ಧೃವತಾರೆ ಶ್ರೀ ಸೂರಿಯವರು. ಅದು ಅವರ ಮಗನಿಗೆ ಅರಿವಾಗದಾಯಿತೇ. ಇದೆಂತಹ ವಿಸ್ಮರಣೆ.!!

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

ಅಜ್ಜಂಪುರ ಸೀತಾರಾಂ