107. ಗಂಗಮ್ಮನ ಪಾಲು


ಗಂಗಮ್ಮನ ಪಾಲು


ಇಲ್ಲಿರುವುದು ಪ್ರಾಚೀನ ಶಿಲ್ಪವಲ್ಲ. ಅದರ ಕಲಾಮೌಲ್ಯಕ್ಕೆಂದೂ ಇದನ್ನು ಪ್ರಕಟಿಸಿಲ್ಲ. ಇದರ ಹಿಂದಿನ ಕಥೆ ಮಾತ್ರ ಹೃದಯಸ್ಪರ್ಶಿಯಾಗಿದೆ. ಇಂಥ ಘಟನೆ ನಾಲ್ಕು ದಶಕಗಳ ಹಿಂದೆ ಅಜ್ಜಂಪುರದಲ್ಲಿ ನಡೆದು ಅದು ಶಿಲ್ಪರೂಪದಲ್ಲಿ ದಾಖಲಾಗಿದೆ ಮತ್ತು ಅದರ ಹಿಂದಿನ ಮನೋಭಾವ ಎಂಥ ನೆಮ್ಮದಿಯನ್ನು ಆ ತಾಯಿಗೆ ನೀಡಿರಬಹುದು ಎನ್ನುವುದೇ ಅದರ ವಿಶೇಷ. ಚಿತ್ರದಲ್ಲಿ ಮೂವರು ಸ್ತ್ರೀಯರ ಚಿತ್ರಗಳಿವೆ. ಅದರಲ್ಲಿ ಮಧ್ಯದಲ್ಲಿರುವುದು ಗಂಗಾಮಾತೆ. ಅಕ್ಕಪಕ್ಕದಲ್ಲಿರುವುದು ಗಂಗಮ್ಮನ ಪಾಲಾದ ಈರ್ವರು ಬಾಲಕಿಯರು.

ಹಿಂದೊಂದು ಮಳೆಗಾಲದ ದಿನಗಳಲ್ಲಿ ಅಜ್ಜಂಪುರದ ಹೊಂಬಾಳಮ್ಮ ಎಂಬ ಮಹಿಳೆಯ ಇಬ್ಬರು ಮಕ್ಕಳು ಅವರೊಂದಿಗೆ ಊರಿನ ಹತ್ತಿರದಲ್ಲಿ ಬುಕ್ಕಾಂಬುಧಿ ರಸ್ತೆಯಲ್ಲಿರುವ ತುಂಬೇ ಹಳ್ಳದ ಬಳಿ ಹೋಗಿದ್ದರು. ಹಳ್ಳದಲ್ಲಿ ತುಂಬ ನೆರೆ ಬಂದಿತು. ದಡದಲ್ಲಿದ್ದ ಇಬ್ಬರು ಹೆಣ್ಣುಮಕ್ಕಳು ನೀರಿನಲ್ಲಿ ಕೊಚ್ಚಿಹೋದರು. ಅಸಹಾಯಕಳಾದ ತಾಯಿಗೆ ಕಣ್ಣೆದುರಿಗೆ ತೇಲಿಹೋದ ಆ ಮಕ್ಕಳನ್ನು ರಕ್ಷಿಸಿಕೊಳ್ಳಲಾಗಲಿಲ್ಲ. ಅವರ ದಾರುಣ ಸಾವು ತಾಯಿಯ ಮನಸ್ಸಿಗೆ ತುಂಬ ಆಘಾತ ನೀಡಿದ್ದು ಸಹಜವೇ ಸರಿ.

ನಂತರ ಆಕೆಯ ಕನಸಿನಲ್ಲಿ ಗಂಗಾಮಾತೆ ಕಾಣಿಸಿಕೊಂಡು, ನಿನ್ನ ಮಕ್ಕಳನ್ನು ನಾನೇ ಕರೆದೊಯ್ದಿರುವೆ. ಅವರ ನೆನಪಿಗೆಂದು ಶಿಲೆಯಲ್ಲಿ ನನ್ನೊಡನೆ ಅವರು ಇರುವಂತೆ ಕಾಣುವ ಶಿಲ್ಪವನ್ನು ಮಾಡಿಸಿ ಹಾಕು ಎಂದು ಹೇಳಿದಳಂತೆ. ಅದರಂತೆ ಆ ತಾಯಿ ಈ ಶಿಲ್ಪವನ್ನು ಮಾಡಿಸಿ, ಹಳ್ಳದ ಬದಿಯಲ್ಲಿ ಸ್ಥಾಪಿಸಿದರು.

ಅದು ಇಂದಿಗೂ ಇದೆ. ಇದನ್ನು ನನ್ನ ಮಿತ್ರ ಮಂಜುನಾಥ ಅಜ್ಜಂಪುರ 2010ರಲ್ಲಿ ಚಿತ್ರಿಸಿದ್ದರು. ಮೊನ್ನೆ ಅದನ್ನು ನೋಡುತ್ತಿದ್ದಾಗ, ಇಂಥ ಶಿಲ್ಪವು ಹಳ್ಳದ ಬದಿಯಲ್ಲಿ ಇರಲು ಕಾರಣವೇನಿದ್ದೀತು ಎಂದು ಮಿತ್ರ ಅಪೂರ್ವ ಅಜ್ಜಂಪುರ (ಅಪ್ಪಾಜಿ) ಇವರನ್ನು ಕೇಳಿದಾಗ, ಇದರ ವಿವರಗಳನ್ನು ತಿಳಿಸಿದರು. ನನ್ನ ಮನಸ್ಸಿಗೆ ತುಂಬ ತಟ್ಟಿದ್ದು ಆ ತಾಯಿಯ ಭಾವನೆ.

ಸತ್ಯವನ್ನು ಹುಡುಕುತ್ತೇನೆಂದು ಕನಸಿನ ಸತ್ಯಾಸತ್ಯತೆಯನ್ನು ವಿಮರ್ಶಿಸುವುದು ಮೂರ್ಖತನವಾದೀತು. ಆದರೆ ತನ್ನ ಮನದ ದುಗುಡವನ್ನು ಕಳೆಯಲು ಆಕೆ ಕಂಡುಕೊಂಡ ಪರಿಹಾರದ ಮಾರ್ಗವನ್ನು ಯಾವ ಮನಶ್ಶಾಸ್ತ್ರಜ್ಞರ ಆಪ್ತಸಲಹೆಯೂ ಸೂಚಿಸಲಾಗದು ಎನ್ನುವುದಷ್ಟೇ ಈ ಶಿಲ್ಪದ ನಿರ್ಮಾಣದ ಹಿಂದಿನ ಉದ್ದೇಶ. ಅದನ್ನು ಕಾರ್ಯಗತ ಮಾಡಿ ಸಮಾಧಾನ ತಳೆದ ಆ ತಾಯಿಯ ಹೃದಯವೈಶಾಲ್ಯವಂತೂ ಸ್ಮರಣೀಯ.

-0-0-0-0-0-0-0-0-0-0-0-

ಕಾಮೆಂಟ್‌ಗಳು

  1. ಪ್ರಾಯಶಃ, ಈ ದುರಂತ ನಡೆದು ಸುಮಾರು ಆರು ದಶಕಗಳಾಗಿರಬಹುದು. ನಾನು ತುಂಬ ಚಿಕ್ಕವನಾಗಿದ್ದಗಲೇ, ಇದರ ಬಗೆಗೆ ಜನ ಮಾತನಾಡಿಕೊಳ್ಳುತ್ತಿದ್ದರು.
    ಅದೇನೇ ಇರಲಿ, ಆ ತಾಯಿಯ ನೋವನ್ನು ಕಲ್ಪಿಸಿಕೊಳ್ಳಲಾಗದು.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

ಅಜ್ಜಂಪುರ ಸೀತಾರಾಂ