ಚವುಡಮ್ಮನ ಗುಡಿ



ಚಿತ್ರದಲ್ಲಿ ಕಾಣುತ್ತಿರುವ ಈ ಚಿಕ್ಕ ದೇವಾಲಯಕ್ಕೆ ಚವುಡಮ್ಮನ ಗುಡಿ ಎಂದು ಹೆಸರು. ದೇವಾಲಯ ಮತ್ತು ಗುಡಿ ಇವೆರಡರ ನಡುವೆ  ಗಾತ್ರ, ವಿಸ್ತಾರ, ಅನುಕೂಲತೆಗಳು ಮುಂತಾದ ವ್ಯತ್ಯಾಸಗಳು ಇರುತ್ತವಾದ್ದರಿಂದ ತೀರ ಸರಳ ರಚನೆಯಾದ ಇದನ್ನು ಗುಡಿ ಎಂದೇ ಕರೆಯುವುದು ವಾಡಿಕೆ. ಅದೇ ರೀತಿ ಕೋಟೆಯಲ್ಲಿರುವ ಹನುಮಂತ ಮತ್ತು ಈಶ್ವರ ದೇವಾಲಯಗಳು ಶಿಷ್ಟರದೆಂದೂ, ಚವುಡಮ್ಮನು ಅಶಿಷ್ಟರ ದೇವಿಯೆಂದೂ ಈಗಿನ ಸಾಹಿತ್ಯಕರು ವಿಶ್ಲೇಷಿಸುತ್ತಾರೆ. ಆದರೆ ಶಿಷ್ಟರಲ್ಲದವರ ದೇವಿಯೂ ಇದೇ ಕೋಟೆಯಲ್ಲಿ ಪೂಜೆಗೊಳ್ಳುತ್ತಿದೆ. ಇದನ್ನೇನು ವಿಶೇಷವೆಂದು ಹೇಳಬೇಕಾದ ಅವಶ್ಯಕತೆಯಿಲ್ಲವಾದರೂ, ದೇವ-ದೇವರ ನಡುವೆಯೇ ಕಂದಕ ಸೃಷ್ಟಿಸಿ, ಭಾವನೆಗಳ ವಿರೂಪ ಮಾಡುವಂಥ ಚಾಲತಿಯಲ್ಲಿರುವ ಸಾಹಿತ್ಯಕ ಪ್ರವೃತ್ತಿಯನ್ನಿಷ್ಟು ನೆನೆದು ಹೇಳಬೇಕಾಯಿತು. ಅಂಥ ಹೊಂದಾಣಿಕೆ, ಸಹಿಷ್ಣುತೆಗಳು ಎಂದಿನಿಂದಲೂ ನಡೆದುಬಂದಿವೆ.

ಇದರಲ್ಲಿ  ಕಲ್ಲುಗುಂಡಿನಂಥ ನಾಲ್ಕಾರು ರಚನೆಗಳಿವೆ. ಇವು ಅಜ್ಜಂಪುರದ ಕೋಟೆಯಲ್ಲಿ ಬಹಳ ಹಿಂದಿನಿಂದಲೂ ಪೂಜೆಗೊಳ್ಳುತ್ತಿವೆ. ಹಿಂದೆ ಸಾಧಾರಣವಾಗಿ ಎಲ್ಲರ ಮನೆಯಲ್ಲೂ ಜಾನುವಾರುಗಳು ಇರುತ್ತಿದ್ದವು. ಹಸುಗಳು ಕರುಹಾಕಿದಾಗ ಅವುಗಳ ಮೊದಲ ದಿನದ ಹಾಲನ್ನು ಚೌಡಮ್ಮನಿಗೆ ಅರ್ಪಿಸಿ ನಂತರ ಅದನ್ನು ಗಿಣ್ಣು ಮಾಡುವ ಸಂಪ್ರದಾಯವಿತ್ತು. ಅದೇ ರೀತಿ ನಾಲ್ಕಾರು ದಿನಗಳ ನಂತರ ಆ ಹಸುವಿನ ಹಾಲಿನಿಂದ ಮೊಸರು ತಯಾರಿಸಿ, ಅದರಿಂದ ಮೊಸರನ್ನ ಮಾಡಿ, ಚೌಡಮ್ಮನನ್ನು ಪೂಜಿಸಿ, ಮಕ್ಕಳಿಗೆ ಮೊಸರನ್ನ ಹಂಚುತ್ತಿದ್ದ ವಾಡಿಕೆಯಿತ್ತು. ಜಾತಿ-ಮತಗಳ ವ್ಯತ್ಯಾಸವಿಲ್ಲದೆ, ಬ್ರಾಹ್ಮಣರ ವಸತಿ ಪ್ರದೇಶದಲ್ಲೇ ಇರುವ ಈ ಚವುಡಮ್ಮನ ಪ್ರಸಾದವನ್ನು ಎಲ್ಲರೂ ಸಮಾನವಾಗಿ ಸಂತೋಷದಿಂದ ಸ್ವೀಕರಿಸುತ್ತಿದ್ದ ದಿನಗಳಿದ್ದವು. ಈಗೀಗ ಊರಿನಲ್ಲಿ ಜಾನುವಾರುಗಳು ಕಡಿಮೆಯಾಗಿವೆ. ರೈತರ ಇಂಥ ಆಚರಣೆಗಳು ತಪ್ಪಿಹೋದಂತೆ ಕಾಣುತ್ತದೆ. ಮಳೆ ಬಾರದ ವರ್ಷಗಳಲ್ಲಿ ಚೌಡಮ್ಮನಿಗೆ ಮೆಣಸಿನಕಾಯಿಯ ಖಾರವನ್ನು ಹಚ್ಚಿ, ಜನರು ತಮ್ಮ ಸಂಕಟವನ್ನು ತೋಡಿಕೊಳ್ಳುವುದುಂಟು.  ಒಂದೊಮ್ಮೆ ಮಳೆ ಬಂದರೆ, ಹಚ್ಚಿದ ಖಾರವನ್ನು ತೆಗೆದು ಚೌಡಮ್ಮನಿಗೆ ಪೂಜೆ ಸಲ್ಲುತ್ತಿತ್ತು.  ಇಲ್ಲಿ ಭಾವನೆ ಮುಖ್ಯವೇ ವಿನಾ ಕ್ರಿಯೆಯಲ್ಲಎಂಬ ಪರಿವೆ ಇದ್ದರೆ, ಆಗ ಇದು ಮೂಢನಂಬಿಕೆ ಎಂದೆನ್ನಿಸದು. 
(ಇದೇ ರೀತಿ ಅಜ್ಜಂಪುರದಲ್ಲಿರುವ ಇತರ ದೇವಾಲಯಗಳ ವಿವರಗಳನ್ನು ನೀಡಲು ಕೋರುತ್ತೇನೆ. ಪ್ರಕಟಿಸಲು ಅನುಕೂಲವಾಗುತ್ತದೆ.)
ಚಿತ್ರಗಳು : ಮಂಜುನಾಥ ಅಜ್ಜಂಪುರ
ಮಾಹಿತಿ : ಶಂಕರ ಅಜ್ಜಂಪುರ
* * * * * * *

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

125. ಆದರ್ಶ ಅಧ್ಯಾಪಕ ಶ್ರೀ ನಾಗರಾಜ್ ಎಂ.ಎನ್.