93. ಮರೆಯಾದ ಮಾಧವರಾವ್ (ಮಾಧು)

93. ಮರೆಯಾದ ಮಾಧವರಾವ್ (ಮಾಧು)








ಬಗ್ಗವಳ್ಳಿ ನರಸಿಂಹಮೂರ್ತಿ ಮಾಧವರಾವ್. ಇದು ಅವರ ಪೂರ್ಣ ಹೆಸರು. ಆದರೆ ಅವರು ಮಾಧು ಎಂಬ ಹೆಸರಿನಿಂದಲೇ ಅಜ್ಜಂಪುರದಲ್ಲಿ ಜನಪ್ರಿಯರಾಗಿದ್ದರು. ತೆಳುವಾದ ಶರೀರ, ಸದಾ ಚಟುವಟಿಕೆ, ಉಡುಗೆ ತೊಡುಗೆಗಳಲ್ಲಿ ಉದಾಸೀನವಿರಲಿಲ್ಲ. ಯಾವ ದುರಭ್ಯಾಸಗಳು ಇರಲಿಲ್ಲ. 59 ಸಾಯುವಂಥ ವಯಸ್ಸೇನೂ ಅಲ್ಲ. ಅನಾಯಾಸೇನ ಮರಣಂ ಎಂಬಂತೆ,  ಬೆಂಗಳೂರಿನಲ್ಲಿರುವ ತಮ್ಮ ಮಗನ ಮನೆಯಲ್ಲಿ ಮಲಗಿದಲ್ಲಿಯೇ ಮೃತರಾದರು.  

ರಾಜಕೀಯ ವಿದ್ಯಮಾನಗಳ ಬಗ್ಗೆ ತುಂಬ ಆಸಕ್ತಿಯಿದ್ದರೂ, ಸ್ಥಳೀಯ ರಾಜಕೀಯದಲ್ಲಿ ಆಸಕ್ತಿ ತಳೆದವರಲ್ಲ. ಬದಲಾಗಿ ಅವರ ಪತ್ನಿಗೆ ಪ್ರೋತ್ಸಾಹ ನೀಡಿದ್ದರು. ಪುರಸಭೆಯ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದುಂಟು. ಗೆಲ್ಲಲಿಲ್ಲ, ಅದು ಬೇರೆಯ ಸಂಗತಿ.

ಅವರ ತಂದೆ ಬಗ್ಗವಳ್ಳಿ ನರಸಿಂಹಮೂರ್ತಿಗಳ ಬಗ್ಗೆ ಇದೇ ಬ್ಲಾಗ್ ನಲ್ಲಿ ನೆನಪನ್ನು ದಾಖಲಿಸಿದ್ದೇನೆ. ಆದರೆ ಮಾಧವರಾವ್ ಬಗ್ಗೆ ನುಡಿನಮನ ಬರೆಯಬೇಕಾಗಿ ಬರುತ್ತದೆಂದು ಎಣಿಸಿರಲಿಲ್ಲ. ಅದೆಲ್ಲ ವಿಧಿಯ ವೈಪರೀತ್ಯವೆಂದಷ್ಟೇ ಹೇಳಬಹುದು. ನಾನು ಅವರ ಎದುರು ಮನೆಯಲ್ಲೇ ಇದ್ದುದು, ನನ್ನ ಬಾಲ್ಯವನ್ನು ಅಜ್ಜಂಪುರದಲ್ಲಿ ಕಳೆದುದರ ಆಧಾರದಲ್ಲಿ, ನಂತರವೂ ಊರಿನೊಂದಿಗೆ ತಪ್ಪದ ನನ್ನ ಒಡನಾಟದಿಂದ ಈ ಬರಹವನ್ನು ದಾಖಲಿಸಲು ಸಾಧ್ಯವಾಗಿದೆ. ಅಂತೆಯೇ ನಾನು ಐದು ವರ್ಷಗಳ  ಹಿಂದೆ ಶಿವಮೊಗ್ಗಕ್ಕೆ ಬಂದು ನೆಲೆಸಿದ ನಂತರ, ಅಜ್ಜಂಪುರದ ಗ್ರಾಮದೇವತೆ ಕಿರಾಳಮ್ಮನ ಜಾತ್ರೆ, ರಥೋತ್ಸವಗಳಿಗೆ ಹೋಗಿಬರುವುದನ್ನು ರೂಢಿಸಿಕೊಂಡೆ. ಈ ಸಮಯದಲ್ಲಿ ಕೆಲವು ವರ್ಷಗಳು ಪೂರ್ವಸೂಚನೆಯಿಲ್ಲದೆಯೂ ಅವರ ಮನೆಗೆ ಹೋಗಿ, ಪ್ರಸಾದ ಸ್ವೀಕರಿಸಿ ಬರುತ್ತಿದ್ದುದು ಮರೆಯದ ನೆನಪು.

ಅವರ ತಂದೆ ಶ್ಯಾನುಭೋಗರಾಗಿದ್ದವರು. ಮಾಧವರಾವ್ ಅದನ್ನು ಮುಂದುವರೆಸುವ ಅವಕಾಶ ದೊರೆಯಲಿಲ್ಲವಾದರೂ, ಶ್ಯಾನುಭೋಗಿಕೆಯ ವಿವರಗಳನ್ನು ನೋಡಿಯೇ ತಿಳಿದಿದ್ದರು. ಪತ್ರ ಬರಹ ಅವರ ಉಪವೃತ್ತಿಯಾಗಿದ್ದುದರಿಂದ ಮನೆಯ ಪಡಸಾಲೆಯಲ್ಲಿ ರೈತರು, ಸಾರ್ವಜನಿಕರು ಒಂದಲ್ಲ ಒಂದು ಸಲಹೆ, ಸೂಚನೆಗಳಿಗೆಂದು ಸೇರಿರುತ್ತಿದ್ದರು.  ರೈತರ ಸಮಸ್ಯೆಗಳ ಪರಿಚಯ ಚೆನ್ನಾಗಿಯೇ ಇದ್ದುದರಿಂದ ಅವರಿಂದ ಸೂಕ್ತ ಸಮಾಧಾನ ದೊರೆಯುತ್ತದೆಂಬ ಭರವಸೆ ಇರುತ್ತಿತ್ತು. ಸ್ಥಳೀಯ ಸಂಸ್ಥೆಗಳ ಕಾನೂನುಗಳು, ವ್ಯವಹರಿಸುವ ರೀತಿ, ಕ್ರಮಗಳಲ್ಲಿ ಅವರಿಗಿದ್ದ ಅನುಭವಗಳಿಂದಾಗಿ ಮಾಧವರಾವ್ ಪರಿಶೀಲಿಸಿ ಸಲಹೆ ನೀಡಿದರೆ ಕೆಲಸದಲ್ಲಿ ತೊಂದರೆ ಬರದು ಎಂಬ ನಂಬಿಕೆಯಿರುತ್ತಿತ್ತು.

ತಮ್ಮ ಆತ್ಮೀಯ ಮಿತ್ರರೊಂದಿಗೆ
ಜಮೀನು ವ್ಯವಹಾರಗಳಿಗೆ ಸಂಬಂಧಿಸಿದಂತೆ, ದಾಖಲಾತಿಗಳು ಕ್ರಯಪತ್ರಗಳ ರೂಪದಲ್ಲಿರುವುದು ಸಾಮಾನ್ಯವಷ್ಟೆ. ಕಳೆದ ಶತಮಾನದ ಆದಿಯಿಂದ ಆರಂಭಿಸಿ, ತೀರ ಇತ್ತೀಚಿನವರೆಗಿನ ಎಲ್ಲ ಪತ್ರಗಳನ್ನು ಓದಿ ವಿಶ್ಲೇಷಿಸಲು ಸಾಕಷ್ಟು ಅನುಭವ ಬೇಕಾಗುತ್ತದೆ. ತೀರ ಹಿಂದಿನ ಕ್ರಯಪತ್ರಗಳು, ದಾನಪತ್ರಗಳು, ಜಮೀನುಗಳ ದಾಖಲಾತಿಗಳು ಕಪ್ಪುರಾಗಿ ಮಸಿಯನ್ನು ಬಳಸಿ ಮೋಡಿ ಅಕ್ಷರಗಳಲ್ಲಿ ಬರೆಯುತ್ತಿದ್ದುದು ರೂಢಿ. ಇಂಥವನ್ನು ಓದಬೇಕಾದರೆ, ಅಕ್ಷರಗಳ ಪರಿಚಯ, ಅವುಗಳ ಪುನರಾವೃತ್ತ ಬಳಕೆಯ ಆಧಾರದಲ್ಲಿ ಗುರುತಿಸಬೇಕಾಗುತ್ತದೆ. ಅಂಥ ಹಳೆಯ ಪತ್ರಗಳನ್ನು ನಾನು ಅವರಲ್ಲಿ ನೋಡಿದ್ದುಂಟು. ಇವಲ್ಲದೆ ಅವರ ತಂದೆಯವರು ಮನೆಯ ಪರಂಪರೆಯ ಪೂಜಾವಿಧಾನಗಳು, ಕ್ರಮ, ವಾರ್ಷಿಕ ನಡೆಯುವ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ತಪಶೀಲಾಗಿ ಬರೆದಿಟ್ಟಿದ್ದ ದಾಖಲೆಗಳನ್ನು ನನಗೆ ತೋರಿಸಿದ್ದರು. ಅವರ ಆ ಪದ್ಧತಿಯು, ಇಂದು ಕಂಪ್ಯೂಟರ್ ಮೂಲಕ ದಾಖಲಿಸುವುದಕ್ಕಿಂತ ಬೇರೆಯಾಗಿರಲಿಲ್ಲ. ಅಷ್ಟು ಅಚ್ಚುಕಟ್ಟು, ನಿಖರತೆಗಳು ಅದರಲ್ಲಿ ಕಾಣುವಂತಿದ್ದವು. ಹೀಗಾಗಿ ಮಾಧವರಾವ್ ಅವರಿಗೆ ಹಳೆಯ ದಾಖಲೆಗಳ ಬಗ್ಗೆ ಆಸಕ್ತಿಯ ಜೊತೆಗೆ, ಅವು ನಮ್ಮ ದೇಶೀಯ ವ್ಯವಹಾರ ಪದ್ಧತಿಯನ್ನು ಸಮರ್ಥವಾಗಿ ಬಿಂಬಿಸುತ್ತವೆ ಎಂಬ ಗೌರವವಿತ್ತು.

ನಾನು ಈ ಬ್ಲಾಗ್ ಗೆ ಸಂಬಂಧಿಸಿದಂತೆ, ಅಜ್ಜಂಪುರದ ಪ್ರಾಚೀನ ದೇವಾಲಯಗಳ ಬಗ್ಗೆ, ಐತಿಹಾಸಿಕ ಸಂಗತಿಗಳ ಬಗ್ಗೆ ಅವರೊಂದಿಗೆ ಚರ್ಚಿಸುತ್ತಿದ್ದೆ. ಅವರಿಗಿದ್ದ ಜನಸಂಪರ್ಕದಿಂದ ಅನೇಕ ವಿಷಯಗಳನ್ನು ಸಂಗ್ರಹಿಸಿಟ್ಟುಕೊಂಡು ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದರು. ಅಜ್ಜಂಪುರದ ಕೋಟೆ ಆಂಜನೇಯ ದೇವಾಲಯದ ಇತಿಹಾಸಕ್ಕೆ ಸಂಬಂಧಿಸಿದಂತೆ ಚಿತ್ರಗಳು, ಮಾಹಿತಿಗಳನ್ನು ನೀಡಿ ಸಹಕರಿಸಿದರು. ಈ ದೇವಾಲಯದ ಜೀರ್ಣೋದ್ಧಾರ ಕಾರ್ಯ ನಡೆದಾಗ,  ಅಲ್ಲಿದ್ದ ಹಳೆಯ ಚಿತ್ರಗಳನ್ನು ನನಗೆ ಸ್ಕ್ಯಾನ್ ಮಾಡಲು ನೀಡಿದ್ದರು. ಅವುಗಳನ್ನು ಬಳಸಿ, 2007ರಲ್ಲಿ ನಡೆದ ಕುಂಭಾಭಿಷೇಕದಲ್ಲಿ ಒಂದು ಪ್ರಾತ್ಯಕ್ಷಿಕೆಯನ್ನು ನಡೆಸಲು ಸಾಧ್ಯವಾಯಿತು.

ಶ್ರೀ ಪ್ರಸನ್ನ ಸೋಮೇಶ್ವರ ದೇಗುಲದ ಎದುರು
ಎಲ್ಲ ಸಣ್ಣ ಊರುಗಳಲ್ಲೂ ಬ್ರಾಹ್ಮಣ್ಯವು ಕುಗ್ಗುತ್ತಿರುವುದು ಕಾಲಮಹಿಮೆ ಎನ್ನುವಂತೆ ನಡೆದಿದೆ. ಅದಕ್ಕೆ ಅಜ್ಜಂಪುರವೂ ಹೊರತಲ್ಲ. ಹಾಗೆಂದು ಸಮಾಜಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ನಿಲ್ಲಿಸಲಾಗದು. ಹಾಗೆಂದೇ ಆಂಜನೇಯ ದೇವಾಲಯದ ಅರ್ಚಕರಾಗಿ ಸೇವೆ ಸಲ್ಲಿಸಿದರು. ಅರ್ಚಕರ ಪ್ರಭಾವದಿಂದಲೇ ಶಿಲೆಯೂ ಶಂಕರನಾಗಿ ಪರಿಣಮಿಸುತ್ತದೆ ಎಂಬ ನಾಣ್ಣುಡಿಯಿದೆ. ಮಾಧವರಾವ್ ತಮ್ಮ ಸೇವಾವಧಿಯಲ್ಲಿ ಕೋಟೆ ಆಂಜನೇಯ ದೇವಾಲಯ ಹಾಗೂ ಶ್ರೀ ಪ್ರಸನ್ನ ಸೋಮೇಶ್ವರ ದೇವಾಲಯಗಳ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದರು. ಪೂಜೆ, ಉತ್ಸವಗಳ ಆಯೋಜನೆಗೆ ಬೆಂಬಲ ನೀಡಿದರು.  ವಿಶೇಷತಃ ಶಿವರಾತ್ರಿಯಂದು ಜನರು ಊರಿನ ಹೊರಭಾಗದಲ್ಲಿ ಎರೆಹೊಸೂರು ರಸ್ತೆಯಲ್ಲಿರುವ ಈಶ್ವರ ದೇವಾಲಯಕ್ಕೆ ಹೋಗಬೇಕಾಗುತ್ತಿತ್ತು. ಆದರೆ ಮಾಧವರಾವ್ ಅರ್ಚಕರಾದ ಮೇಲೆ ಸೋಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆಯನ್ನು ಆಯೋಜಿಸುವ ಮೂಲಕ ಜನರು ಶಿವನ ದರ್ಶನಕ್ಕೆಂದು ದೂರ ಹೋಗುವುದನ್ನು ತಪ್ಪಿಸಿದರು. ಕೋಟೆ ಆಂಜನೇಯ ದೇವಾಲಯದ ಪುನರುತ್ಥಾನದ ಬಳಿಕ ಅಲ್ಲಿ ಭಕ್ತರ ಸಂಖ್ಯೆಯೂ ಹೆಚ್ಚಿತು. ಶನಿವಾರದಂದು ನಡೆಯುವ ಭಜನೆ, ಕಾರ್ತೀಕಮಾಸದ ದೀಪಾರಾಧನೆಗಳಿಗೆ ಕಳೆ ಬರುವಂತಾಯಿತು.

ಒಮ್ಮೆ ಆಂಜನೇಯನ ಪೂಜಾ ಕೈಂಕರ್ಯದಲ್ಲಿ ತೊಡಗಿದ್ದಾಗ, ವಿಗ್ರಹವು ಬೆವರಲು ಆರಂಭಿಸಿದ ಬಗ್ಗೆ ಹೇಳಿದ್ದರು. ಅದರ ಕ್ಯಾಮೆರಾ ಚಿತ್ರವನ್ನೂ ತೆಗೆದಿದ್ದರು. ಅವರಿಗೆ ಪವಾಡ ಸದೃಶ ಸಂಗತಿಯನ್ನು ಹುಟ್ಟುಹಾಕಿ, ಜನರನ್ನು ಹೇಗಾದರೂ ಮಾಡಿ ನಂಬಿಸಬೇಕೆಂಬ ಹುನ್ನಾರವಂತೂ ಇರಲಿಲ್ಲ. ಅವರ ಧರ್ಮಶ್ರದ್ಧೆಯನ್ನು ಹತ್ತಿರದಿಂದ ಬಲ್ಲ ಯಾರೂ ಇದನ್ನು ಅನುಮೋದಿಸುತ್ತಾರೆ. ಅವರು ತಮ್ಮ ಅನುಭವವನ್ನು ಹೇಳಿಕೊಂಡರೇ ವಿನಾ, ಯಾರನ್ನೂ ನಂಬುವಂತಾಗಲೀ, ಪ್ರಚಾರ ನೀಡುವುದನ್ನಾಗಲೀ ಮಾಡಲಿಲ್ಲ. ಅದೊಂದು ವೈಯುಕ್ತಿಕ ಅನುಭವ ಎಂದು ಹೇಳಿಕೊಂಡಿದ್ದರು. ಅಂಥ ಪ್ರಾಮಾಣಿಕತೆಯನ್ನು ಯಾರೂ ಮೆಚ್ಚಬೇಕಾಗುತ್ತದೆ. 

ಒಮ್ಮೆ ಜನಪ್ರಿಯ ಜ್ಯೋತಿಷಿಯೊಬ್ಬರು ಟಿವಿಯಲ್ಲಿ ನೀಡಿದ ಸಲಹೆಯಂತೆ ಕೋಟೆ ಆಂಜನೇಯ ದೇಗುಲದಲ್ಲಿ ಹಾಲಿನ ಅಭಿಷೇಕ ಮಾಡುವುದು ಅನಿವಾರ್ಯವಾಯಿತು. ಜನರು ಲೀಟರುಗಟ್ಟಲೇ ಹಾಲನ್ನು ತಂದು ಮಾಧವರಾವ್ ಮನೆಯಲ್ಲಿ, ದೇವಾಲಯದಲ್ಲಿ ಪಾತ್ರೆಗಳಲ್ಲಿ ತಂದಿರಿಸಿದರು. ಅದಷ್ಟು ಹಾಲಿನ ಅಭಿಷೇಕ ನಡೆಸಿ, ಅವರವರ ಪಾತ್ರೆಗಳನ್ನು ಅವರಿಗೆ ತಲುಪಿಸಿದ್ದು, ಅಭಿಷೇಕ ಮಾಡಿದ ಹಾಲನ್ನು ವಿತರಣೆ ಮಾಡುವಲ್ಲಿ ಉಂಟಾದ ಶ್ರಮ, ಆಯಾಸಗಳ ಬಗ್ಗೆ ಹೇಳಿಕೊಂಡಿದ್ದರು. ಯಾರೋ ಎಲ್ಲೋ ಕುಳಿತು ಹೇಳಿದ ಮಾತಿನ ಪರಿಣಾಮಗಳು ಏನಾಗುತ್ತವೆ ಎಂಬ ಅರಿವು ಹೇಳಿದವರಿಗೆ ಇರುವುದಿಲ್ಲ. ಆದರೆ ಅದನ್ನು ನಿರ್ವಹಿಸುವಲ್ಲಿ ತಪ್ಪಾದರೆ, ಜನರು ರೊಚ್ಚಿಗೇಳುತ್ತಾರೆ. ಅವರ ಸಮಾಧಾನವನ್ನು ಕಾಯ್ದುಕೊಳ್ಳುವುದು ಕಷ್ಟದ ಕೆಲಸ ಎಂಬುದನ್ನು ಅವರು ವಿವರಿಸಿದ್ದರು. ಅದು ನಿಜವೂ ಹೌದು. ಏಕೆಂದರೆ ಸಾರ್ವಜನಿಕ ಸ್ಥಾನದಲ್ಲಿ ಕೆಲಸಮಾಡುವವರು ಸಂಯಮ ಕಳೆದುಕೊಂಡರೆ ಅನಾಹುತ ಕಟ್ಟಿಟ್ಟ ಬುತ್ತಿ. ಸಮಾಜಕ್ಕೆ ಇನ್ನಷ್ಟು ಸೇವೆ ಸಲ್ಲಿಸಬಹುದಾದ ಎಲ್ಲ ಅವಕಾಶಗಳಿದ್ದ ಮಾಧವರಾವ್ ರಂಥ ಓರ್ವ ಸಜ್ಜನ ಮರೆಯಾದುದು ನಷ್ಟವೇ ಸರಿ. ಆದರೆ ಅವರ ಸೇವೆ, ಧರ್ಮಶ್ರದ್ಧೆಗಳು ಸದಾ ಸ್ಮರಣೆಯಲ್ಲಿರುತ್ತದೆ ಎಂದರೆ ಅದು ಅತಿಶಯೋಕ್ತಿಯಾಗಲಾರದು.


-0-0-0-0-0-0-0-0-0-0-0-0-0-0-0-0-0-

ಕಾಮೆಂಟ್‌ಗಳು

  1. Satyanarayana Satya -Very bad to hear the sad news.of our friend.mr.maadhu last his breath at the early age..let his soul rest in peace and almighty give the strength to his family members to bear the loss

    Manjunatha Ajjampura
    Manjunatha Ajjampura ಮಾಧು ಇಲ್ಲ ಎಂಬುದನ್ನು ನಂಬುವುದೇ ಕಷ್ಟ. ನಮಗಿಂತ ಚಿಕ್ಕವರು ಇನ್ನಿಲ್ಲವಾದಾಗ ಆಗುವ ನೋವು - ವಿಷಾದಗಳೇ ಅನೂಹ್ಯ. ಓಂ ಶಾಂತಿಃ

    Renuka Ramanath
    Renuka Ramanath tumba dukkada sangti devaru avara atmakke shanti kodali

    Sowmya Kumarswamy
    Sowmya Kumarswamy Namboke agthilla...thumbane bejaraythu, madhu uncle antha nenapu madikoltidhe...Namma balyadalli avra maneyalli odadi atavadta idvi...

    Shashidharan CG
    Shashidharan CG ಅಗಲಿದ ಹಿರಿಯರ ಚೇತನದ ಆತ್ಮಕ್ಕೆ ಶಾಂತಿ ಸಿಗಲಿ.

    Swamy Naranapura
    Swamy Naranapura ತುಂಬಾ ನೋವಿನ ಸಂಗತಿ, ಅವರ ಆತ್ಮಕ್ಕೆ ಶಾಂತಿ ಸಿಗಲಿ

    Nataraja Ajjampura
    Nataraja Ajjampura Om shanthi...unbelievable news..shocked to hear ...very unfortunate

    Achuthamurthy Blam
    Achuthamurthy Blam Madhu was the opening batsman for Ajjampura team. sad to hear about his demise.

    Kshetra Prasad
    Kshetra Prasad Om Shanti

    Kavitarao Mys
    Kavitarao Mys RIP

    Shylaa Venkatesh
    Shylaa Venkatesh Nanna sodara maava avaru.yaake istu bega horataru .namma vyakthithwavannu belasidavaru.tumba sajjana

    Shylaa Venkatesh
    Shylaa Venkatesh Ee nudinamanakke dhanyavaadagalu shankaranna

    B S Laxminarayana Rao
    B S Laxminarayana Rao ನಮ್ಮ ತಲೆಮಾರಿನ,ನಮ್ಮೂರಿನ ಕೋಟೆ ಹುಡುಗರ ಪೈಕಿ ಮಧು ಅತ್ಯಂತ ಕಿರಿಯ. ಇಷ್ಟು ಬೇಗ ವಿಧಿವಶನಾದನೆಂಬುದು ನಂಬಲಾಗುತ್ತಿಲ್ಲ. ಬಾಲ್ಯದಲ್ಲಿ ಸಂಘದ ಶಾಖೆಗೆ ಬಂದು, ಜೀವನದಲ್ಲಿ ಆದರ್ಶ, ಪ್ರೇರಣೆ ಪಡೆದ ವ್ಯಕ್ತಿತ್ವ ಮಧುವಿನದು. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ.

    Anusuya Krishnappa
    Anusuya Krishnappa ಮನಸ್ಸಿಗೆ ತುಂಬಾ ನೋವಾಯಿತು ಅವರ ಆತ್ಮಕ್ಕೆ ಶಾಂತಿ ಸಿಗಲಿ

    ನಾಗೇಂದ್ರ ಸಿ. ವಿ. ಅಜ್ಜಂಪುರ
    ನಾಗೇಂದ್ರ ಸಿ. ವಿ. ಅಜ್ಜಂಪುರ RIP, It's really unbelievable. Shocking

    Mohamed Kaleemulla
    Mohamed Kaleemulla ಹಿರಿಯರ ಆತ್ಮಕ್ಕೆ ಶಾಂತಿ ದೊರೆಯಲಿ

    Ajjampur N Seethalakshmi
    Ajjampur N Seethalakshmi Very sad to hear the bad news. May his soul rest in peace. OM SHANTI
    🙏

    Ramanand S Belur
    Ramanand S Belur Very very sad to hear the news. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಓಂ ಶಾಂತಿ 🙏

    Keshavamurthy Hathwar
    Keshavamurthy Hathwar ಆತ್ಮಕ್ಕೆ ಶಾಂತಿ ಸಿಗಲಿ

    Kumaraswamy Gavirangappa
    Kumaraswamy Gavirangappa Rest in peace

    GT Sreedhara Sharma ಅಜ್ಜಂಪುರದ ಕೋಟೆಯಲ್ಲಿರುವ ಆಂಜನೇಯ ಮತ್ತು ಸೋಮೇಶ್ವರ ದೇವಸ್ಥಾನಗಳನ್ನು ನೆನಪುಮಾಡಿಕೊಳ್ಳುವಾಗ ಮಾಧುವನ್ನು ಮರೆಯುವಂತೆಯೇ ಇಲ್ಲ. ಆತ ಒಬ್ಬ ಅರ್ಚಕನಾಗಿ ಪೂಜೆಮಾಡದೆ ಸಾಧಕನಾಗಿ, ಭಕ್ತನಾಗಿ ಪೂಜಿಸುತ್ತಿದ್ದುದನ್ನು ನಾ ಮರೆಯಲಾರೆ. ನಿಜಕ್ಕೂ ಅಕಾಲಿಕ ಮರಣ.ಆತನ ಆತ್ಮಕ್ಕೆ ಶಾಂತಿಸಿಗಲಿ. ದುಃಖವನ್ನು ತಾಳಿಕೊಳ್ಳುವ ಶಕ್ತಿಯನ್ನು ಕುಟುಂವರ್ಗದವರಿಗೆ ಆ ಭಗವಂತ ಕೊಡಲಿ ಎಂದು ಪ್ರಾರ್ಥಿಸುತ್ತೇನೆ.

    Nadguli Mahendra Hegde ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ,,,, ಹರಿಃ ಓಂ ,,

    ಪ್ರತ್ಯುತ್ತರಅಳಿಸಿ
  2. Nataraja Ajjampura
    Nataraja Ajjampura Om shanthi

    Narsipur Doddamane Nagaraja ನಿಜಕ್ಕೂ ನಂಬಲಸಾಧ್ಯ.ಅಪರೂಪದ ಸಾಧು ಸಜ್ಜನ ವ್ಯಕ್ತಿತ್ವ.ಅಕಾಲಿಕ ಮರಣ.
    ವಿಧಿಯಾಟ ಬಲ್ಲವರಾರು! ಭಗವಂತನು ಅವರ ಪರಿಶುದ್ಧಾತ್ಮಕ್ಕೆ ಶಾಂತಿ ಕೊಡಲಿ.
    ಅವರ ಕುಟುಂಬಕ್ಕೆ ದುಃಖವನ್ನು ಸಹಿಸಿಕೊಳ್ಳುವ ಶಕ್ತಿ ಹಾಗೂ ಸಮಾಧಾನವನ್ನು ಕರುಣಿಸಲೆಂದು ಪ್ರಾರ್ಥಿಸುತ್ತೇನೆ.

    ಪ್ರತ್ಯುತ್ತರಅಳಿಸಿ
  3. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

125. ಆದರ್ಶ ಅಧ್ಯಾಪಕ ಶ್ರೀ ನಾಗರಾಜ್ ಎಂ.ಎನ್.